ಬೆಂಗಳೂರು: ‘ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಖಾಲಿ ಇದ್ದರೆ ಶುಲ್ಕ ಭರಿಸಲು ಸಿದ್ಧರಿರುವವರಿಗೆ ಚಿಕಿತ್ಸೆ ನೀಡಲು ನಿರಾಕರಿಸುವಂತಿಲ್ಲ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧಿಸೂಚನೆ ಹೊರಡಿಸಿದ್ದಾರೆ.
‘ಕೋವಿಡ್ ಲಕ್ಷಣ ಹೊಂದಿದ್ದರೂ, ಹೊಂದದೇ ಇದ್ದರೂ ಹಾಸಿಗೆ ಲಭ್ಯ ಇದ್ದರೆ ಚಿಕಿತ್ಸೆ ನಿರಾಕರಿಸಬಾರದು. ಪಾಸಿಟಿವ್ ಅಥವಾ ನೆಗೆಟಿವ್ ವರದಿ ತರುವಂತೆ ಒತ್ತಾಯಿಸಬಾರದು. ಎಸ್ಎಂಎಸ್, ವಾಟ್ಸ್ಆ್ಯಪ್, ಆರೋಗ್ಯ ಸೇತು ವರದಿ ಆಧರಿಸಿ ಚಿಕಿತ್ಸೆಗೆ ದಾಖಲಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.
‘ಸಾಮಾನ್ಯ ರೋಗಿಗೂ ಕೋವಿಡ್ ಹರಡಬಹುದು ಎಂಬ ಭಯದಿಂದ ಚಿಕಿತ್ಸೆ ನೀಡಲು ತಪ್ಪಿಸಿಕೊಳ್ಳುವುದು ಅಥವಾ ಪ್ರವೇಶ ನಿರಾಕರಿಸುವುದು ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ 2017ರ ನಿಬಂಧನೆಗಳಿಗೆ ವಿರುದ್ಧವಾಗಿದೆ’ ಎಂದಿದ್ದಾರೆ.