ಜನವರಿಯಿಂದ ಏಪ್ರಿಲ್ ತನಕ ಕೃಷಿ ಜಮೀನಿನಲ್ಲೇ ಕುರಿಗಳಿಗೆ ಮೇವು ಒದಗಿಸಿಕೊಳ್ಳುವ ಕುರಿಗಾರರು, ಉಳಿದ ದಿನಗಳಲ್ಲಿ ಬೆಟ್ಟಗುಡ್ಡಗಳನ್ನೇ ಆಶ್ರಯಿಸುತ್ತಾರೆ. ನಾಲ್ಕೈದು ಕುಟುಂಬಗಳು ಕುರಿಗಳನ್ನು ಒಟ್ಟು ಮಾಡಿಕೊಂಡು ಬೆಟ್ಟಗುಡ್ಡಗಳಲ್ಲೇ ಜೀವನ ಸಾಗಿಸುತ್ತಾರೆ. ಮಕ್ಕಳು, ಮಹಿಳೆಯರೂ ಜೊತೆಯಲ್ಲಿ ಇರುವ ಕಾರಣ ಮಳೆಯಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ಟೆಂಟ್ಗಳನ್ನು ನಿರ್ಮಿಸಿಕೊಳ್ಳುವುದು ರೂಢಿ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಈ ಟೆಂಟ್ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಗರ್ಭಗುಡಿ ಬೆಟ್ಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕುರಿಗಾರರನ್ನು ಹೊರ ದಬ್ಬುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.