ನೂತನ ಮೇಯರ್ ಗಂಗಾಂಬಿಕೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು ಹೀಗೆ.
ಪಾಲಿಕೆಯ ಕಚೇರಿಯಲ್ಲಿ ದೇವರ ಪೂಜೆ ನೆರವೇರಿಸಿ ಸೋಮವಾರ ಅಧಿಕಾರ ವಹಿಸಿಕೊಂಡ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
‘ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ಅಧಿಕಾರಿಗಳ ವರ್ತನೆ ನೋಡಿದರೆ ನನಗೆ ಬೇಜಾರಾಗುತ್ತದೆ. ವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ಗುಂಡಿ ಮುಚ್ಚಿರುವ ಪ್ರದೇಶಗಳಿಗೆ ನಾನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ. ನನ್ನ ಅವಧಿಯಲ್ಲಿ ಕಳಪೆ ಕಾಮಗಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನಾನು ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ. ನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ರಸ ರಾಶಿ ಹಾಕುವ ಪ್ರವೃತ್ತಿಯನ್ನು ತಡೆಯಬೇಕಾಗಿದೆ’ ಎಂದರು.
ಪಾಲಿಕೆ ಅಧಿಕಾರಿಗಳ ಜೊತೆ ಮೇಯರ್ ಸಭೆ ನಡೆಸಿದರು.
ಮರಬಿದ್ದ ಸ್ಥಳಕ್ಕೆ ಭೇಟಿ: ಸಂಜೆ ವೇಳೆ ಭಾರಿ ಗಾಳಿಗೆ ಜಯನಗರ ಮೂರನೇ ಬ್ಲಾಕ್, ಭೈರಸಂದ್ರ ವಾರ್ಡ್ಗಳಲ್ಲಿ ಏಳೆಂಟು ಮರಗಳು ಧರೆಗುರುಳಿವೆ. 11ಕ್ಕೂ ಹೆಚ್ಚು ಮರಗಳ ಕೊಂಬೆಗಳು ಉರುಳಿ ಬಿದ್ದಿವೆ. ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಮರಗಳನ್ನು ಶೀಘ್ರವೇ ತೆರವುಗೊಳಿಸುವಂತೆ ಸೂಚನೆ ನೀಡಿದರು.