ಮೈಸೂರು: ಜೆಡಿಎಸ್ನೊಳಗಿನ ಅಸಮಾಧಾನ ಮತ್ತೊಮ್ಮೆ ಆಸ್ಫೋಟಗೊಂಡಿದ್ದು, ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಶಾಸಕ ಜಿ.ಟಿ.ದೇವೇಗೌಡ ತಮ್ಮೊಳಗಿನ ಕುದಿಯನ್ನು ಗುರುವಾರ ಮತ್ತೆ ಹೊರಹಾಕಿದ್ದಾರೆ.
ನಗರದಲ್ಲಿ ನಡೆದ ಜೆಡಿಎಸ್ ಮುಖಂಡರ ಚಿಂತನ–ಮಂಥನ ಸಭೆಗೆ ಗೈರಾದ ಬಗ್ಗೆ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿದ್ದು, ‘ರಾಜಕೀಯದಲ್ಲಿ ನನಗೆ ಯಾರೊಬ್ಬರು ಗುರುವಿಲ್ಲ. ಶಾಸಕ ಸಾ.ರಾ.ಮಹೇಶ್ಗೆ ಕೆಟ್ಟವರಾದವರೆಲ್ಲಾ ಕುಮಾರಸ್ವಾಮಿಗೂ ಕೆಟ್ಟವರೇ. ನಮ್ಮ ಜನರು ಕುಮಾರಸ್ವಾಮಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ನನಗೆ ಆಹ್ವಾನವೇ ಇರದಿದ್ದರಿಂದ ಸಭೆಗೆ ಹೋಗಲಿಲ್ಲ’ ಎಂದಿದ್ದಾರೆ.
‘ಜಿ.ಟಿ.ದೇವೇಗೌಡ ಹಿಂದಿನ ದಸರಾದ ಉಸ್ತುವಾರಿ ಸಚಿವರಿದ್ದರು. ತಮ್ಮ ಅನುಭವ ಧಾರೆ ಎರೆಯಲಿಕ್ಕಾಗಿ ಬಿಜೆಪಿ ಸಚಿವರಿಗೆ ಬೆಂಬಲ ನೀಡುತ್ತಿದ್ದಾರೆ. ದಸರಾದಲ್ಲಿ ಬ್ಯುಸಿಯಾಗಿದ್ದಾರೆ. ನಾನೇ ದಸರಾ ಮಾಡಿ ಎಂದು ಕಳುಹಿಸಿಕೊಟ್ಟಿದ್ದೇನೆ’ ಎಂದು ಎಚ್.ಡಿ.ಕುಮಾರಸ್ವಾಮಿ ಜಿ.ಟಿ.ದೇವೇಗೌಡ ಗೈರಿನ ಕುರಿತು ಮಾಧ್ಯಮದವರ ಪ್ರಶ್ನೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
‘ಜಿ.ಟಿ.ದೇವೇಗೌಡರ ಎಲ್ಲಾ ಹೇಳಿಕೆಗಳನ್ನು ಗಮನಿಸಿದ್ದೇನೆ. ಎಲ್ಲಿಗೆ ಬೇಕಾದರೂ ಹೋಗಲಿ. ಅವರನ್ನು ಯಾರೂ ಹಿಡಿದಿಟ್ಟುಕೊಂಡಿಲ್ಲ. ನಾವ್ಯಾರು ಅವರ ಬಗ್ಗೆ ಮಾತನಾಡಿಲ್ಲ. ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಸೋನಿಯಾಗಾಂಧಿ ಜತೆ ಚರ್ಚಿಸಿ ನಿರ್ಧರಿಸುವುದಾಗಿ’ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾಧ್ಯಮದವರಿಗೆ ತಿಳಿಸಿದರು.