2050ನೇ ಇಸವಿಯ ವೇಳೆಗೆ ಸಮುದ್ರದ ಮಟ್ಟ ಏರಿಕೆಯಾಗಿ ಮಂಗಳೂರು, ಮುಂಬೈ ಮತ್ತು ಕೋಲ್ಕತ್ತಗಳಿಗೆ ಮುಳುಗಡೆ ಆತಂಕ ಎದುರಾಗಿರುವ ಸುದ್ದಿ ಅಚ್ಚರಿಯದೇನಲ್ಲ. ಜಾಗತಿಕ ತಾಪಮಾನ ಏರಿಕೆಯೇ ಈ ನಗರಗಳ ಮುಳುಗಡೆ ಭೀತಿಗೆ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಷ್ಟಾದರೂ ಮರಗಳನ್ನು ಕಡಿದು, ಕಾಡಿಗೆ ಬೆಂಕಿ ಹಚ್ಚಿ ಕಾಂಕ್ರೀಟ್ ಕಾಡು ನಿರ್ಮಿಸುವುದು ನಿಂತಿಲ್ಲ. ಈ ಕ್ಷಣದ ನಮ್ಮ ಸುಖಕ್ಕಾಗಿ ಮುಂದಿನ ಪೀಳಿಗೆಯ ಭವಿಷ್ಯವನ್ನು ಅಂಧಕಾರದ ಕೂಪಕ್ಕೆ ನೂಕುತ್ತಿದ್ದೇವೆ. ಮುಂದಿನ ಪೀಳಿಗೆಗೆ ಶುದ್ಧ ನೀರಿಲ್ಲ, ಶುದ್ಧ ಗಾಳಿಯಿಲ್ಲ, ಕೊನೆಗೆ ನೆಲೆ ನಿಲ್ಲಲು ಭೂಮಿಯೂ ಇಲ್ಲದೆ ಅತಂತ್ರರಾಗಲು ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಮಾಡಿಬಿಟ್ಟಿದ್ದೇವೆ.