ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26/11ರ ಮುಂಬೈ ಉಗ್ರರ ದಾಳಿಗೆ 10 ವರ್ಷ; ದೇಶ ಕಲಿತ ಪಾಠವೆಷ್ಟು?

Last Updated 26 ನವೆಂಬರ್ 2018, 2:36 IST
ಅಕ್ಷರ ಗಾತ್ರ

ಅದು ದೇಶದ ಪಾಲಿಗೆ ‘ಕರಾಳ ದಿನ’. ಏನೆಲ್ಲಾ ಭದ್ರತಾ ವ್ಯವಸ್ಥೆಗಳಿದ್ದರೂ ಎಲ್ಲರನ್ನೂ ಬೆಚ್ಚಿಬೀಳಿಸಿದ ಘಟನೆ ‘ರಕ್ತ ಪಿಪಾಸು’ ಉಗ್ರರಿಂದ ನಡೆದೇಬಿಟ್ಟಿತು. ಅದೇ ‘2008ರ ನವೆಂಬರ್‌ 26ರ ಮುಂಬೈ ಮೇಲಿನ ದಾಳಿ’. ಈ ಕಹಿ ಘಟನೆ ನಡೆದು ಭಾರತದ ಇತಿಹಾಸದ ಪುಟಳನ್ನು ಸೇರಿ 2018ರ ನವೆಂಬರ್‌ಗೆ 10 ವರ್ಷಗಳು.

ಇದಕ್ಕಿಂತ ಘೋರವಾದ ದಾಳಿ 2001ರ ಸೆ.9ರಂದು ಅಮೆರಿಕದ ಪೆಂಟಗನ್‌ನ ಅವಳಿ ಕಟ್ಟಡಳ ಮೇಲೆ ಉಗ್ರ ಒಸಮಾ ಬಿನ್‌ ಲಾಡೆನ್‌

ಸಹಚರರಿಂದ ನಡೆಯಿತು. ಆ ದಾಳಿಯಲ್ಲಿ ಸರಿಸುಮಾರು ಮೂರು ಸಾವಿರ ಮಂದಿ ಪ್ರಾಣ ತೆತ್ತರು.

ಈ ಎರಡು ದಾಳಿಗಳು ವಿಶ್ವಮಟ್ಟದಲ್ಲಿ ಭದ್ರತೆಯ ಸವಾಲುಗಳನ್ನು ಮುಂದಿಟ್ಟವು. ಶಕ್ತಿಶಾಲಿ ಅಮೆರಿಕವೇ ಉಗ್ರರ ‘ರಕ್ತದಾಹ’ಕ್ಕೆ ಕಂಗೆಟ್ಟಿತ್ತು. ಉಗ್ರರನ್ನು ಮಟ್ಟಹಾಕಲು ಇನ್ನಿಲ್ಲದ ಸಾಹಸಗಳನ್ನುಮಾಡಿತು. ಅಮೆರಿಕದಲ್ಲಿ ದಾಳಿ ನಡೆದು ಏಳು ವರ್ಷಗಳ ಬಳಿಕ ಭಾರತ ಇಂತಹದ್ದೊಂದು ದಾಳಿಗೆ ಗುರಿಯಾಯಿತು. ಇದಾದ ಬಳಿಕ ದೇಶದಲ್ಲಿ ಆಗಿಂದಾಗ್ಗೆ ಉಗ್ರರ ದಾಳಿಗಳು ಸಣ್ಣ–ದೊಡ್ಡ ಪ್ರಮಾಣದಲ್ಲಿ ನಡೆಯುತ್ತಲೇ ಇವೆ. ಇಂತಹ ಘಟನೆಗಳ ಬಳಿಕವೂ ನಾವೇನು (ದೇಶ) ಪಾಠ ಕಲಿತೆವು ಎಂಬುದು ಬಹುಮುಖ್ಯ.

ಮಾಸದ ಗಾಯ...

'ಭಯೋತ್ಪಾದನೆಗೆ ಹೆದರಿ ಅಡಗಬಾರದು. ಅದರ ವಿರುದ್ಧ ಹೋರಾಡಿ ನಿರ್ಮೂಲನೆಗೆ ಪಣತೊಡಬೇಕು' – ಇದು ಮುಂಬೈ ದಾಳಿಯಲ್ಲಿ ಗಾಯಗೊಂಡು ಬದುಕುಳಿದ ದೇವಿಕಾ ರೋಟವಾನ್‌ ಹೇಳಿದ ಮಾತು.

‘ಆ ದಿನದ ಪ್ರತಿಕ್ಷಣವೂ ನೆನಪಿನಲ್ಲಿ ಉಳಿದಿದೆ’ ಎನ್ನುವ ದೇವಿಕಾಗೆ ಆಗ 10 ವರ್ಷ. ಛತ್ರಪತಿ ಶಿವಾಜಿ ಟರ್ಮಿನಲ್‌ನಲ್ಲಿ ಮನಬಂದಂತೆ ಪ್ರಯಾಣಿಕರ ಮೇಲೆ ಇಬ್ಬರು ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಈಕೆಯ ಕಾಲಿಗೆ ಗಾಯವಾಗಿತ್ತು. ದಾಳಿಯಲ್ಲಿ ಬದುಕಿದ ಅತಿ ಕಿರಿಯ ವಯಸ್ಸಿನ ಸಾಕ್ಷಿ, ಮೊಹಮ್ಮದ್‌ ಅಜ್ಮಲ್‌ ಅಮಿರ್‌ ಕಸಬ್‌ನನ್ನು ವಿಚಾರಣೆ ವೇಳೆ ಗುರುತಿಸಿದ್ದಳು. –ಹೀಗೆ, ದೇವಿಕಾ ಮನಸ್ಸಿನಲ್ಲಿ ಆ ಘಟನೆ ಎಂದೂ ಮಾಸದ ಘಟನೆಯಾಗಿ ಉಳಿದಿದೆ. ಇದೇ ರೀತಿ ದೇಶದ ಜನರ ಪಾಲಿಗೆ ಕರಾಳ ದಿನವಾಗಿ ಅಚ್ಚೊತ್ತಿದೆ.

ಮುಂಬೈ ದಾಳಿಗೆ ಎರಡು ಬಾರಿ ಯತ್ನ

2008ರ ನ.26ರಂದು ಮುಂಬೈ ಮೇಲೆ ದಾಳಿ ನಡೆಸುವುದಕ್ಕೂ ಮೊದಲೇ ಎರಡು ಬಾರಿ ಪಾಕಿಸ್ತಾನದ ಉಗ್ರರು ಈ ನಗರದ ಮೇಲೆ ದಾಳಿ ನಡೆಸಲು ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದರು ಎಂಬ ಅಂಶವನ್ನು ಪಾಕಿಸ್ತಾನ ಮೂಲದ ಅಮೆರಿಕದ ಉಗ್ರ ಡೇವಿಡ್‌ ಹೆಡ್ಲಿ ಬಹಿರಂಗಪಡಿಸಿದ್ದ. ಇದು ನೆರೆಯ ರಾಷ್ಟ್ರದಿಂದ ಉಗ್ರರ ಉಪಟಳ ಎಷ್ಟರಮಟ್ಟಿಗಿದೆ ಎಂಬುದನನ್ನು ತೋರುತ್ತದೆ.

ದಾಳಿಗೆ ಸಾಕ್ಷಿಯಾದ ತಾಜ್ ಹೋಟೆಲ್

2008ರ ನ. 26ರಂದು ಮುಂಬೈನ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಲ್‌, ನಾರಿಮನ್‌ ಹೌಸ್‌ ಸೇರಿದಂತೆ ಆರು ಕಡೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಸಮುದ್ರ ಮಾರ್ಗವಾಗಿ ಮುಂಬೈಗೆ ನುಸುಳಿದ್ದ 10 ಮಂದಿ ಉಗ್ರರ ತಂಡ ಈ ಕೃತ್ಯ ಎಸಗಿತ್ತು. ಭದ್ರತಾ ಪಡೆಯ ಯೋಧರು ಉಗ್ರ ಅಜ್ಮಲ್‌ ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿದಿದ್ದರು.

ಉಗ್ರರ ಈ ದಾಳಿಯಲ್ಲಿ ಸ್ಥಳೀಯರು, ವಿದೇಶಿ ಪ್ರವಾಸಿಗರು ಹಾಗೂ ಭದ್ರತಾ ಪಡೆಯ ಯೋಧರು ಸೇರಿದಂತೆ 166 ಜನರು ಮೃತಪಟ್ಟಿದ್ದರು. ಘಟನೆಯಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಕಸಬ್‌ಗೆ ಗಲ್ಲು

ಜೀವಂತವಾಗಿ ಸೆರೆಸಿಕ್ಕ ಉಗ್ರ ಅಜ್ಮಲ್‌ ಕಸನ್‌ಗೆ ಮುಂಬೈನ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತು. ನ್ಯಾಯಾಮೂರ್ತಿ ಎಂ.ಎಲ್‌. ತಹಲ್ಯಾನಿ ಶಿಕ್ಷೆ ವಿಧಿಸಿದ್ದರು. ನಂತರ ಕಸಬ್‌ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಳ್ಳಿ ಹಾಕಿದ್ದ ಸುಪ್ರೀಂ ಕೋರ್ಟ್‌ ಮುಂಬೈ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಕಸಬ್‌ನನ್ನು 2012ರ ನವೆಂಬರ್‌ನಲ್ಲಿ ಗಲ್ಲಿಗೇರಿಸಲಾಯಿತು.

* ಇದನ್ನೂ ಓದಿ:ಫೋಟೊ ಮಾತು

ದಾಳಿ ನಡೆಸಲು ಪಾಕಿಸ್ತಾನದ ಉಗ್ರರು ಹೇಗೆಲ್ಲಾ ಪ್ರಯತ್ನ ಮಾಡಿದ್ದರು, ಸಂಚು ರೂಪಿಸಿದ್ದರು ಎಂಬೆಲ್ಲಾ ಸತ್ಯಗಳು ಗೊತ್ತಾಗಿದ್ದು ಪಾಕಿಸ್ತಾನ ಮೂಲದ ಅಮೆರಿಕದ ಉಗ್ರ, ಈ ದಾಳಿಯ ಸಂಚುಕೋರ ಡೇವಿಡ್‌ ಹೆಡ್ಲಿ ನೀಡಿದ ಹೇಳಿಕೆಗಳಿಂದ. ಅವನ ಹೇಳಿಕೆಗಳು ಈ ಘಟನೆಯ ಹಿಂದಿನ ಸತ್ಯವನ್ನು ಬಿಚ್ಚಿಡುತ್ತದೆ.

ಮುಂಬೈ ದಾಳಿಯ ಪ್ರಮುಖ ಸಂಚುಕೋರ ಡೇವಿಡ್‌ ಹೆಡ್ಲಿ ಮೇಲೆ ಅಮೆರಿಕದ ಜೈಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು. ಮುಂಬೈನಲ್ಲಿ ನಡೆಸಿದ ದಾಳಿಗಾಗಿ ಅಮೆರಿಕ ನ್ಯಾಯಾಲಯ ಹೆಡ್ಲಿಗೆ 35 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

2008ರ ನ. 26ರಂದು ಮುಂಬೈ ಮೇಲೆ ದಾಳಿ ನಡೆಸುವುದಕ್ಕೂ ಮೊದಲೇ ಎರಡು ಬಾರಿ ಪಾಕಿಸ್ತಾನದ ಉಗ್ರರು ಈ ನಗರದ ಮೇಲೆ ದಾಳಿ ನಡೆಸಲು ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದರು ಎಂಬ ಅಂಶವನ್ನು ಪಾಕಿಸ್ತಾನ ಮೂಲದ ಅಮೆರಿಕದ ಉಗ್ರ ಡೇವಿಡ್‌ ಹೆಡ್ಲಿ ಬಹಿರಂಗಪಡಿಸಿದ್ದ.

ಅಮೆರಿಕದ ಅಜ್ಞಾತ ಸ್ಥಳದಿಂದ 2018ರ ಮೇನಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಪಾಲ್ಗೊಂಡ ಹೆಡ್ಲಿ, ಹಲವು ಸ್ಫೋಟಕ ವಿವರಗಳನ್ನು ಬಾಯ್ಬಿಟ್ಟಿದ್ದಾನೆ.

‘2008ರ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಮುಂಬೈ ಮೇಲೆ ದಾಳಿಗೆ ನಡೆಸಿದ್ದ ಪ್ರಯತ್ನಗಳು ವಿಫಲವಾಗಿದ್ದವು. ನವೆಂಬರ್‌ನಲ್ಲಿ ನಡೆಸಿದ ಪ್ರಯತ್ನ ಯಶ ಕಂಡಿತ್ತು’ ಎಂದು ಹೆಡ್ಲಿ ಹೇಳಿದ್ದಾನೆ.

ಮೊದಲ ಪ್ರಯತ್ನದ ಬಗ್ಗೆ ಕೇಳಿದಾಗ, ‘ಲಷ್ಕರ್‌ ಆತ್ಮಹತ್ಯಾ ದಳದ 10 ಸದಸ್ಯರಿದ್ದ ದೋಣಿ ಸಮುದ್ರದಲ್ಲಿ ಬಂಡೆಗೆ ಅಪ್ಪಳಿಸಿದ್ದರಿಂದ ಮೊದಲ ಪ್ರಯತ್ನ ವಿಫಲವಾಗಿತ್ತು. ಅದರಲ್ಲಿದ್ದ ಶಸ್ತ್ರಾಸ್ತ್ರಗಳು ನೀರಿಗೆ ಬಿದ್ದ ಕಾರಣ ಎಲ್ಲರೂ ಪಾಕ್‌ಗೆ ವಾಪಸಾಗಿದ್ದರು’ ಎಂದಿದ್ದಾನೆ.
‘ಅದಾದ ಒಂದು ತಿಂಗಳ ಬಳಿಕ ಎರಡನೇ ಪ್ರಯತ್ನ ನಡೆದಿತ್ತು. ಆದರೆ ಅದು ಕೂಡಾ ವಿಫಲವಾಗಿತ್ತು’ ಎಂದು ಉತ್ತರಿಸಿದ್ದಾನೆ. ಮೊದಲ ಮತ್ತು 2ನೇ ಪ್ರಯತ್ನದ ವೇಳೆ ದೋಣಿಯಲ್ಲಿದ್ದವರು ಯಾರು ಎಂದು ಕೇಳಿದಾಗ, ‘ಎರಡೂ ಸಲ ಅದೇ ಹತ್ತು ಮಂದಿ ಇದ್ದರು’ ಎಂದಿದ್ದಾನೆ, ಮೂರನೇ ಬಾರಿ ಅದೇ ತಂಡ ಬಂದಿತ್ತೇ ಎಂಬ ಪ್ರಶ್ನೆಗೆ, ‘ಹೌದು. ಅದೇ 10 ಮಂದಿ ಇದ್ದರು’ ಎಂದು ಹೇಳಿದ್ದಾನೆ.

ಮುಂಬೈ ದಾಳಿಯ ವಿಚಾರಣೆ ನಡೆಸಿದ್ದ ಮುಂಬೈ ಕ್ರೈಂ ಬ್ರಾಂಚ್‌ ಮತ್ತು ರಾಷ್ಟ್ರೀಯ ತನಿಖಾ ದಳಕ್ಕೆ ದೊರೆತ ಹೊಸ ಮಾಹಿತಿ ಇದು. ದಾಳಿಯ ವೇಳೆ ಸೆರೆಸಿಕ್ಕಿದ್ದ ಏಕೈಕ ಉಗ್ರ ಅಜ್ಮಲ್‌ ಕಸಬ್‌ ಕೂಡಾ ವಿಚಾರಣೆ ವೇಳೆ ಈ ಮಾಹಿತಿ ನೀಡಿರಲಿಲ್ಲ.

ಮುಂಬೈ ದಾಳಿಯ ಪ್ರಮುಖ ಸಂಚುಕೋರ ಡೇವಿಡ್‌ ಹೆಡ್ಲಿ
ಮುಂಬೈ ದಾಳಿಯ ಪ್ರಮುಖ ಸಂಚುಕೋರ ಡೇವಿಡ್‌ ಹೆಡ್ಲಿ

ಲಷ್ಕರ್‌ ಕೃತ್ಯ: ಮುಂಬೈ ದಾಳಿಯು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಮತ್ತು ಲಷ್ಕರ್‌ ಎ ತಯಬಾ ಸಂಘಟನೆ ಸೇರಿ ನಡೆಸಿದ್ದ ಕೃತ್ಯ ಎಂಬುದನ್ನು ಹೇಡ್ಲಿ ಮತ್ತೊಮ್ಮೆ ದೃಢಪಡಿಸಿದ್ದಾನೆ. ಐಎಸ್ಐ ಜತೆ ಕೆಲಸ ಮಾಡುತ್ತಿದ್ದ ಪಾಕ್‌ ಸೇನೆಯ ಮೂವರು ಮೇಜರ್‌ಗಳನ್ನು (ನಿವೃತ್ತ) ಭೇಟಿಯಾಗಿದ್ದೆ ಎಂದೂ ತಿಳಿಸಿದ್ದಾನೆ.

ಲಷ್ಕರ್‌ ಸಂಘಟನೆಯ ಕಟ್ಟಾ ಬೆಂಬಲಿಗನಾಗಿದ್ದೆ ಎಂಬುದನ್ನು ಒಪ್ಪಿಕೊಂಡಿರುವ ಆತ, ಒಟ್ಟು ಎಂಟು ಸಲ ಭಾರತಕ್ಕೆ ಭೇಟಿ ನೀಡಿದ್ದಾಗಿ ಹೇಳಿದ್ದಾನೆ.

* ಮೂರು ಮದುವೆ

ತಾನು ಮೂರು ಮದುವೆಯಾಗಿರುವುದಾಗಿ ಹೆಡ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಪತ್ನಿಯರ ಹೆಸರನ್ನು ಶಾಜಿಯಾ ಗೀಲಾನಿ, ಪೋರ್ಟಿಯಾ ಪೀಟರ್ಸ್‌ ಮತ್ತು ಫಾಯಿಜಾ ಔತೆಲ್ಲಾ ಎಂದಿದ್ದಾನೆ.

‘ನೀನು ವಿವಾಹಿತನೇ’ ಎಂದು ಉಜ್ವಲ್‌ ನಿಕಂ ಕೇಳಿದಾಗ, ‘ಹೌದು. 1999ರಲ್ಲಿ ಮದುವೆಯಾಗಿದ್ದೆ’ ಎಂದು ಉತ್ತರಿಸಿದ್ದಾನೆ. ‘ನಿನಗೆ ಎಷ್ಟು ಪತ್ನಿಯರಿದ್ದಾರೆ’ ಎಂದಾಗ, ‘ಒಂದು’ ಎಂದನಲ್ಲದೆ, ಶಾಜಿಯಾಳ ಹೆಸರು ತಿಳಿಸಿದ್ದಾನೆ. ಪೋರ್ಟಿಯಾ ಪೀಟರ್ಸ್‌ ನಿನಗೆ ಏನಾಗಬೇಕು ಎಂದು ಕೇಳಿದಾಗ, ‘ಆಕೆಯನ್ನೂ ಮದುವೆಯಾಗಿದ್ದೇನೆ’ ಎಂದಿದ್ದಾನೆ. ಫಾಯಿಜಾಳ ಬಗ್ಗೆ ಕೇಳಿದಾಗ, ‘ಆಕೆ ನನ್ನ ಮೂರನೇ ಪತ್ನಿ. 2007ರಲ್ಲಿ ಮದುವೆಯಾಗಿದ್ದೇನೆ’ ಎಂದು ಉತ್ತರಿಸಿದ್ದಾನೆ.

ವೀಸಾ ಪಡೆಯಲು ಸುಳ್ಳು ಮಾಹಿತಿ

ಷಿಕಾಗೊದಲ್ಲಿರುವ ಭಾರತೀಯ ಕಾನ್ಸಲ್‌ ಜನರಲ್‌ ಕಚೇರಿಯಲ್ಲಿ ಭಾರತದ ವೀಸಾಕ್ಕೆ ಅರ್ಜಿ ಸಲ್ಲಿಸುವಾಗ ಸುಳ್ಳು ವಿವರಗಳನ್ನು ನೀಡಿದ್ದನ್ನು ಹೆಡ್ಲಿ ಒಪ್ಪಿಕೊಂಡಿದ್ದಾನೆ. ‘ನನ್ನ ಹುಟ್ಟಿದ ದಿನಾಂಕ, ಜನ್ಮಸ್ಥಳ, ರಾಷ್ಟ್ರೀಯತೆ, ತಾಯಿಯ ಹೆಸರು, ಆಕೆಯ ರಾಷ್ಟ್ರೀಯತೆ ಮತ್ತು ಪಾಸ್‌ಪೋರ್ಟ್‌ ನಂಬರ್‌ ಹೊರತುಪಡಿಸಿ ಉಳಿದೆಲ್ಲ ಮಾಹಿತಿಗಳನ್ನು ತಪ್ಪಾಗಿ ನೀಡಿದ್ದೆ. ನನ್ನ ನೈಜ ಗುರುತು ಮರೆಮಾಚಲು ಹೀಗೆ ಮಾಡಿದ್ದೆ’ ಎಂದಿದ್ದಾನೆ.

ಹೆಸರು ಬದಲಿಸಿದ್ದೆ

‘ದಾವೂದ್‌ ಗಿಲಾನಿ ಎಂಬುದು ನನ್ನ ನಿಜವಾದ ಹೆಸರು. ಭಾರತಕ್ಕೆ ಸುಲಭವಾಗಿ ಭೇಟಿ ನೀಡುವ ಉದ್ದೇಶದಿಂದ 2006ರಲ್ಲಿ ಹೆಸರನ್ನು ಡೇವಿಡ್‌ ಹೆಡ್ಲಿ ಎಂದು ಬದಲಿಸಿದ್ದೆ’ ಎಂದಿದ್ದಾನೆ.

ಹೆಡ್ಲಿಯ ತಪ್ಪೊಪ್ಪಿಗೆ

* ನಾನು ಲಷ್ಕರ್‌ ಎ ತಯಬಾ ಸಂಘಟನೆಯ ಕಟ್ಟಾ ಬೆಂಬಲಿಗ
* ಭಾರತಕ್ಕೆ ಭೇಟಿ ನೀಡುವ ಉದ್ದೇಶದಿಂದ ದಾವೂದ್‌ ಗಿಲಾನಿ ಹೆಸರನ್ನು ಡೇವಿಡ್‌ ಹೆಡ್ಲಿ ಎಂದು ಬದಲಿಸಿದ್ದೆ
* ಭಾರತವನ್ನು ಶತ್ರು ದೇಶದಂತೆ ಕಂಡಿದ್ದೆ
* ಭಾರತಕ್ಕೆ ಒಟ್ಟು 8 ಸಲ ಭೇಟಿ; ಏಳು ಸಲ ಪಾಕ್‌ನಿಂದ ನೇರವಾಗಿ ಬಂದಿದ್ದರೆ, ಒಮ್ಮೆ ಯುಎಇಯಿಂದ ಬಂದಿದ್ದೆ
* ದಾಳಿಗೆ ಮುನ್ನ 7 ಸಲ ಮುಂಬೈಗೆ ಭೇಟಿ; ದಾಳಿಯ ಬಳಿಕ ಒಮ್ಮೆ ದೆಹಲಿಗೆ (2009ರ ಮಾರ್ಚ್‌) ಭೇಟಿ
* ಎಲ್‌ಇಟಿ ಮುಖ್ಯಸ್ಥ ಹಫೀಜ್‌ ಸಯೀದ್‌ನ ಭಾಷಣದಿಂದ ಪ್ರಭಾವಿತನಾಗಿ 2002 ರಲ್ಲಿ ಎಲ್‌ಇಟಿ ಸೇರಿದ್ದೆ
* ಹಫೀಜ್‌ ಮತ್ತು ಎಲ್‌ಇಟಿ ಕಮಾಂಡರ್‌ ಝಕೀವುರ್‌ ರೆಹಮಾನ್‌ ಲಖ್ವಿ ಅವರ ಮಾರ್ಗದರ್ಶನದಲ್ಲಿ ತರಬೇತಿ
* ಐಎಸ್ಐ ಅಧಿಕಾರಿಗಳಾದ ಮೇಜರ್‌ ಇಕ್ಬಾಲ್‌, ಮೇಜರ್‌ ಅಲಿ ಮತ್ತು ಮೇಜರ್‌ ಅಬ್ದುಲ್ ರೆಹಮಾನ್‌ ಪಾಷಾ ಅವರ ಭೇಟಿಯಾಗಿದ್ದೆ
* ಎಲ್‌ಇಟಿ ಮುಖಂಡ ಸಾಜಿದ್‌ ಮೀರ್‌ ಜತೆ ಸಂಪರ್ಕ; ಆತನ ನಿರ್ದೇಶನದಂತೆ ಕೆಲಸ
* ಮುಂಬೈ ಮೇಲಿನ ದಾಳಿಯ ಎರಡು ಪ್ರಯತ್ನಗಳು ವಿಫಲವಾಗಿದ್ದವು
* ಮುಂಬೈ ನಗರದ ವಿಡಿಯೊ ಚಿತ್ರೀಕರಣ ಮಾಡಿದ್ದೆ
* ನನಗೆ ಮೂರು ಮದುವೆಯಾಗಿದೆ
* ಭಾರತದ ವೀಸಾ ಪಡೆಯಲು ಸುಳ್ಳು ಮಾಹಿತಿ ನೀಡಿದ್ದೆ
* ಪಾಕ್‌– ಆಫ್ಘನ್‌ ಗಡಿಯಲ್ಲಿ ಒಮ್ಮೆ ನನ್ನನ್ನು ಬಂಧಿಸಲಾಗಿತ್ತು

ಉಗ್ರರು ನಡೆಸಿದ ಮುಂಬೈ ದಾಳಿ ಸಿ.ಸಿ ಟಿ.ವಿಯಲ್ಲಿ ದಾಖಲಾಗಿರುವ ವಿಡಿಯೊ:

* ಮುಂಬೈ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ಬಿಡುಗಡೆ: ಪಾಕಿಸ್ತಾನ ಕೋರ್ಟ್‌ ಆದೇಶ
ಮುಂಬೈ ದಾಳಿಯ ಸಂಚುಕೋರ ಹಾಗೂ ನಿಷೇಧಿತ ಜಮಾತ್‌ ಉದ್ ದವಾ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಬಿಡುಗಡೆ ಮಾಡಿ ಪಾಕಿಸ್ತಾನದ ಕೋರ್ಟ್ ಒಂಬತ್ತು ವರ್ವಗಳ ಬಳಿಕ ಆದೇಶಿಸಿತ್ತು. ಭಯೋತ್ಪಾದನಾ ನಿಗ್ರಹ ಕಾಯ್ದೆ(ಎಟಿಎ) ಅಡಿಯಲ್ಲಿ ಹಫೀಜ್‌ನನ್ನು ಬಂಧಿಸಲಾಗಿತ್ತು.

* ಮುಂಬೈ ದಾಳಿ ಮಾದರಿಯಲ್ಲೇ ಪ್ಯಾರಿಸ್‌ನಲ್ಲಿ ಅಟ್ಟಹಾಸ
2015ರಲ್ಲಿ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನ ವಿವಿಧ ಸ್ಥಳಗಳಲ್ಲಿ ಫುಟ್‌ಬಾಲ್‌ ಪಂದ್ಯ ನಡೆಯುತ್ತಿದ್ದ ಕ್ರೀಡಾಂಗಣದ ಮೇಲೆ ಭಯೋತ್ಪಾದಕರು ನಡೆಸಿದ ಭೀಕರ ದಾಳಿಗೆ 120 ಜನ ಜೀವ ತೆತ್ತಿದ್ದರು. ಈ ದಾಳಿ ಮುಂಬೈ ಮೇಲೆ 2008ರ ನ. 11ರಂದು ನಡೆದ ದಾಳಿಯಂತೆಯೇ ಇದೆ ಎಂದು ಅಮೆರಿಕದಲ್ಲಿನ ಭದ್ರತಾ ವಿಶ್ಲೇಷಕರು ಹೇಳಿದ್ದರು.

ಭಯೋತ್ಪಾದಕ ಕೃತ್ಯಗಳು ಜನರಲ್ಲಿ ಸೃಷ್ಟಿಸಿರುವ ಆತಂಕವನ್ನು ಪಾಶ್ಚಿಮಾತ್ಯ ಜಗತ್ತು ಇನ್ನು ಬೇರೆಯದೇ ರೀತಿಯಲ್ಲಿ ನೋಡಲಿದೆ. ಪ್ಯಾರಿಸ್‌ ಮೇಲಿನ ದಾಳಿ ಅಂಥದ್ದೊಂದು ಸಂದರ್ಭ ಸೃಷ್ಟಿಸಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ಪ್ಯಾರಿಸ್‌ ಮೇಲಿನ ದಾಳಿಯು ಕಡಿಮೆ ಖರ್ಚಿನಲ್ಲಿ, ಕಡಿಮೆ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರಲ್ಲಿ ಮತ್ತು ಇತರ ಕೆಲವು ಆಯಾಮಗಳಲ್ಲಿ ಮುಂಬೈ ಮೇಲೆ 2008ರ ನವೆಂಬರ್‌ 26ರಂದು ನಡೆದ ದಾಳಿಯನ್ನು ಹೋಲುತ್ತದೆ’ ಎಂದು ನ್ಯೂಯಾರ್ಕ್‌ ಪೊಲೀಸ್‌ ಇಲಾಖೆಯ ಗುಪ್ತದಳ ಮತ್ತು ಭಯೋತ್ಪಾದನಾ ನಿಗ್ರಹ ದಳದ ಉಪ ಆಯುಕ್ತ ಜಾನ್‌ ಮಿಲ್ಲರ್‌ ಸಿಎನ್‌ಎನ್‌ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

* 26/11ರ ಮುಂಬೈ ದಾಳಿ ಪ್ರಕರಣ: ಪಾಕ್‌ಗೆ ಭಾರತದ ಯುದ್ಧ ಭಯವಿತ್ತೆ?
ಮುಂಬೈಯಲ್ಲಿ 26/11 ರ ದಾಳಿ ಬಳಿಕ ಭಾರತ ಕಠೋರವಾಗಿ ಪ್ರತಿಕ್ರಿಯಿಸಿದ್ದರಿಂದ ಕಂಗಾಲಾಗಿದ್ದ ಪಾಕಿಸ್ತಾನವು ತರಾತುರಿಯಲ್ಲಿ ಅಮೆರಿಕ, ಚೀನಾ ಮತ್ತು ಸೌದಿ ಅರೆಬಿಯಾಕ್ಕೆ ತುರ್ತು ದೂರವಾಣಿ ಕರೆ ಮಾಡಿ ಭಾರತವು ಯುದ್ಧ ಮಾಡಲು ನಿರ್ಧರಿಸಿದೆ ಎಂದು ತಿಳಿಸಿತ್ತು.

ಪಾಕಿಸ್ತಾನದ ಉನ್ನತ ಅಧಿಕಾರಿಗಳು ಅಮೆರಿಕದ ಶ್ವೇತಭವನಕ್ಕೆ ದೂರವಾಣಿ ಕರೆ ಮಾಡಿ ಭಾರತವು ಯುದ್ಧ ಮಾಡುವ ಬೆದರಿಕೆ ಹಾಕಿದೆ ಎಂದು ತಿಳಿಸಿದ್ದರು. ಈ ವಿಷಯವನ್ನು ಅಧ್ಯಕ್ಷರ ಸಹಾಯಕರು ತಮಗೆ ಆತಂಕದಿಂದ ತಿಳಿಸಿದ್ದರು ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಂಡೋಲಿಸಾ ರೈಸ್ ಅವರು ತಮ್ಮ ಹೊಸ ಪುಸ್ತಕ `ನೋ ಹೈ ಆನರ್ಸ್‌ನಲ್ಲಿ ತಿಳಿಸಿದ್ದರು. ಮುಂಬೈ ದಾಳಿಯ ನಂತರ ತಾವು ಭಾರತದ ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಜತೆ ನಡೆಸಿದ ಮಾತುಕತೆಯಲ್ಲಿ ಯುದ್ಧದ ಮಾತು ಪ್ರಸ್ತಾಪವಾಗಿರಲಿಲ್ಲ. ಬದಲಿಗೆ ಪಾಕಿಸ್ತಾನವು ಭಯೋತ್ಪಾದಕ ಕೃತ್ಯದ ಹೊಣೆ ಹೊತ್ತುಕೊಂಡು ಇಂತಹ ಕೃತ್ಯ ಎಸಗುವವರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿಲಾಗಿತ್ತು ಎಂದು ರೈಸ್ ತಿಳಿಸಿದ್ದರು.

ಭಾರತದ ಆಗಿನ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಶಿ ಅವರಿಗೆ ಕಠೋರ ಪದಗಳಿಂದ ಎಚ್ಚರಿಕೆ ನೀಡಿದ್ದರಿಂದ ಅವರು ಗಾಬರಿಯಾಗಿ ಇನ್ನೇನು ಭಾರತದ ಸೇನೆಯು ಪಾಕಿಸ್ತಾನದ ಮೆಲೆ ಎರಗಲಿದೆ ಎಂದು ಭಯಪಟ್ಟಿದ್ದರು. ಆತಂಕಗೊಂಡ ಪಾಕಿಸ್ತಾನ ತನ್ನ ಮಿತ್ರ ರಾಷ್ಟ್ರಗಳಿಗೆ ಯುದ್ಧದ ಭೀತಿಯನ್ನು ಹರಡಿಸಿತ್ತು ಎಂದು ರೈಸ್ ಅವರು ತಮ್ಮ ಪುಸ್ತಕದಲ್ಲಿ ವಿವರಿಸಿದ್ದರು.

ಸಾಲು ಸಾಲು ಕೃತಿಗಳು

ಉಗ್ರ ಅಜ್ಮಲ್ ಕಸಾಬ್‌ನನ್ನು ಗಲ್ಲಿಗೇರಿಸಿದ ನಂತರ ಮುಂಬೈ ದಾಳಿ ಕುರಿತು ಸಾಲು ಸಾಲುಪುಸ್ತಕಗಳು ಪ್ರಕಟವಾದವು, ಆ ಸಾಲಿಗೆ `14 ಹವರ್ಸ್‌: ಆನ್ ಇನ್‌ಸೈಡರ್ಸ್‌ ಅಕೌಂಟ್ ಆಫ್ ದಿ ತಾಜ್ ಅಟ್ಯಾಕ್' ಪುಸ್ತಕ ಕೂಡ ಒಂದು. ದಾಳಿ ನಡೆದು ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ ಈ ಕೃತಿ ಬಿಡುಗಡೆಯಾಗಿತ್ತು. ಅಂಕುರ್ ಚೌಲಾ ಈ ಪುಸ್ತಕದ ಕತೃ. ದಾಳಿ ನಡೆದ ವೇಳೆ ಇವರು ತಾಜ್ ಹೋಟೆಲ್‌ನಲ್ಲಿ ಟ್ರೈನಿಯಾಗಿದ್ದರು. ಉಗ್ರರ ಅಟ್ಟಹಾಸವನ್ನು ಪ್ರತ್ಯಕ್ಷವಾಗಿ ಕಂಡಿರುವ ಅಂಕುರ್, 14 ಗಂಟೆಗಳ ಕಾಲ ಅನುಭವಿಸಿದ `ಮಾನಸಿಕ ತಳಮಳಗಳನ್ನು' ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಜೊತೆಗೆ, ದಾಳಿಯಲ್ಲಿ ಬದುಕುಳಿದವರ ರೋಚಕ ಅನುಭವಗಳು ಈ ಪುಸ್ತಕದಲ್ಲಿವೆ.

ಈಚಿನ ದಾಳಿಗಳು; ದೇಶ ಎಚ್ಚೆತ್ತ ಬಗೆ ಸಾಕೇ?

* ಜಮ್ಮು ಕಾಶ್ಮೀರದಲ್ಲಿ ಆಗಿಂದಾಗ್ಗೆ ಉಗ್ರರ ದಾಳಿ ನಡೆಯುತ್ತಲೇ ಇವೆ. ನಾಗರಿಕರ ಹತ್ಯೆಯಾಗುತ್ತಲೇ ಇವೆ. ಭಾರತೀಯ ಸೇನೆಯ ಯೋಧರೊಬ್ಬರನ್ನು ಉಗ್ರರು ಕತ್ತು ಸೀಳಿ ಹತ್ಯೆ ಮಾಡಿದ್ದರು.

* ಪಂಜಾಬ್‌ನ ಪಠಾಣ್‌ಕೋಟ್ ವಾಯು ನೆಲೆಯೊಳಗೆ ನುಗ್ಗಿ ವ್ಯಾಪಕ ಹಾನಿ ಮಾಡಲು ಪಾಕ್ ಮೂಲದ ಉಗ್ರಗಾಮಿಗಳು ನಡೆಸಿದ ದಾಳಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ರಕ್ಷಣಾ ಸ್ಥಾವರಗಳ ಭದ್ರತೆ ವಿಚಾರದಲ್ಲಿ ನಮ್ಮ ಎಚ್ಚರ, ಸನ್ನದ್ಧತೆ ಸಾಲದು ಎಂಬುದನ್ನು ಇದು ಎತ್ತಿ ತೋರಿಸಿತ್ತು.

* ಉಗ್ರರನ್ನು ಪ್ರತಿರೋಧಿಸುವ ದಾಳಿಯ ಸಂದರ್ಭದಲ್ಲಿ ಕಾರ್ಯಾಚರಣೆಯ ವೈಫಲ್ಯಗಳು ಎದ್ದು ಕಾಣಿಸುವಂತಹದ್ದು. ಗೂಢಚರ ಮಾಹಿತಿಗಳು ಲಭ್ಯವಾದರೂ ಅದರ ಪೂರ್ಣ ಲಾಭ ಪಡೆಯುವಲ್ಲಿ ವಿಫಲರಾಗುತ್ತಿರುವುದು ಆತಂಕಕಾರಿ. 26/11 ಮುಂಬೈ ದಾಳಿ ಹಾಗೂ 2015 ಜುಲೈನಲ್ಲಿ ಗುರುದಾಸ್‌ಪುರದಲ್ಲಿ ನಡೆದ ದಾಳಿಗಳಿಂದ ನಾವಿನ್ನೂ ಪಾಠ ಕಲಿಯಲಿಲ್ಲವೆ ಎಂಬ ಪ್ರಶ್ನೆ ಏಳುತ್ತದೆ. ಈ ಇಡೀ ಕಥನದಲ್ಲಿ ಹಲವು ವಿಚಾರಗಳು ವಿವರಣೆಗೇ ದಕ್ಕುವುದಿಲ್ಲ.

* ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ ಪರಿಕ್ಕರ್ ಅವರೂ ವಾಯು ನೆಲೆ ಮೇಲಿನ ದಾಳಿಗೆ ಭದ್ರತಾ ಲೋಪ ಕೂಡ ಕಾರಣ ಎಂದು ಒಪ್ಪಿಕೊಂಡಿದ್ದರು.

* ಅತಿ ಸೂಕ್ಷ್ಮವಾದ ಗಡಿ ಜಿಲ್ಲೆಯ ಎಸ್‌ಪಿಯೇ ಸ್ವತಃ ಉಗ್ರರಿಂದ ಅಪಹರಣಕ್ಕೊಳಗಾಗಿ ಎಸ್‌ಪಿ ಕಾರನ್ನೇ ಉಗ್ರರು ಬಳಸಿಕೊಳ್ಳುವಂತಹ ಸ್ಥಿತಿಯೂ ಅನೇಕ ಪ್ರಶ್ನೆಗಳನ್ನೆತ್ತುತ್ತಿದ್ದವು.

* ಗುರುದಾಸ್‌ಪುರ, ಪಠಾಣ್‌ಕೋಟ್ ಪ್ರದೇಶಗಳು ಮಾದಕ ವಸ್ತು ಅಕ್ರಮ ಸಾಗಣೆ ಮಾರ್ಗಗಳಾಗಿಯೂ ಬಳಕೆಯಾಗುತ್ತವೆ ಎನ್ನಲಾಗಿದೆ. ಈ ಸಮಸ್ಯೆ ರಾಷ್ಟ್ರಕ್ಕೆ ಭಾರಿ ಭದ್ರತಾ ಬೆದರಿಕೆಯಾಗಿ ಪರಿಣಮಿಸುವಂತಾಗಬಾರದು ಎಂಬ ಎಚ್ಚರ ಇರಬೇಕು.

* ಗಡಿ ಸಮೀಪದಲ್ಲೇ ಇರುವ ಈ ವಾಯುನೆಲೆ ಪ್ರದೇಶ ಸನ್ನದ್ಧ ಸ್ಥಿತಿಯಲ್ಲೇ ಇರುವಂತಹದ್ದು. ಹೀಗಿದ್ದೂ ಒಳಗಡೆ ಸೇರಿಕೊಂಡಿದ್ದ ಉಗ್ರರನ್ನು ನಿರ್ನಾಮ ಮಾಡುವ ಕಾರ್ಯಾಚರಣೆಯಲ್ಲಿ ಸಮನ್ವಯದ ಕೊರತೆ ಇತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಒಳ ನುಗ್ಗಿದ್ದ ಎಲ್ಲ ಆರು ಉಗ್ರರನ್ನು ಪೂರ್ಣ ನಿರ್ನಾಮ ಮಾಡಲು ನಾಲ್ಕು ದಿನ ಬೇಕಾಯಿತು. ಏಳು ಯೋಧರನ್ನು ಕಳೆದುಕೊಳ್ಳಬೇಕಾಯಿತು. ಉಗ್ರರು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದರು.

* ಬೇಹುಗಾರಿಕೆ ಕೈಕೊಟ್ಟಿದೆಯೇ ಅಥವಾ ಅವರು ಸೂಚನೆ ಕೊಟ್ಟರೂ ನಿರ್ಲಕ್ಷಿಸಲಾಗುತ್ತಿದೆಯೇ ಎಂಬ ಪ್ರಶ್ನೆಗಳು ಎದುರಾಗುತ್ತವೆ.

* ಇವುಗಳೇನೇ ಇದ್ದರೂ ಭದ್ರತಾ ಸನ್ನದ್ಧತೆಯ ವಿಚಾರದಲ್ಲಿ ಮುಂಬೈ ದಾಳಿ ಬಳಿ ಪಠಾಣ್‌ಕೋಟ್ ದಾಳಿ ಪ್ರಕರಣ ಎಚ್ಚರಿಕೆ ಗಂಟೆಯಾಗಿತ್ತು. ಭದ್ರತೆಯ ಸನ್ನದ್ಧತೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಲಪಡಿಸುವತ್ತ ಹೆಜ್ಜೆ ಹಾಕುವುದು ಅಗತ್ಯವಾಗಿ ಕಂಡುಬಂತು.

* 2016ರ ಸೆಪ್ಟೆಂಬರ್‌ನಲ್ಲಿ ಮುಂಬೈ ಉರಣ್‌ನಲ್ಲಿರುವ ನೌಕಾ ನೆಲೆ ಸಮೀಪ ಸೇನಾ ಸಮವಸ್ತ್ರ ಧರಿಸಿದ ನಾಲ್ಕಕ್ಕೂ ಹೆಚ್ಚು ಜನರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಕೆಲವು ಶಾಲಾ ಮಕ್ಕಳು ಹಾಗೂ ಶಿಕ್ಷಕರು ಮಾಹಿತಿ ನೀಡಿದ್ದರಿಂದ ಮುಂಬೈ ಕರಾವಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಉರಿ ಸೇನಾನೆಲೆ ಮೇಲೆ ಉಗ್ರರ ದಾಳಿ ನಡೆದು ನಾಲ್ಕು ದಿನಗಳ ನಂತರ ಈ ಘಟನೆ ನಡೆದಿತ್ತು.

* ಕೊಲಾಬಾದ ಬಾಂಧವರ್ ಪಾರ್ಕ್‌ ಸಮೀಪದ ಮೀನುಗಾರರ ಕಾಲೊನಿ ಪ್ರದೇಶದ ಮೂಲಕ 26/11ರ ಮುಂಬೈ ದಾಳಿಕೋರರು ಪಾಕಿಸ್ತಾನದಿಂದ ದೋಣಿಯಲ್ಲಿ ಬಂದಿದ್ದರು.

ಒಸಾಮ ಬಿನ್ ಲಾಡೆನ್ ಹತ್ಯೆ ಮತ್ತು ನಂತರದ ಪಾಕಿಸ್ತಾನದ ಪರಿಸ್ಥಿತಿಯ ಹಿನ್ನೆಲೆಯಲ್ಲಿ 2011ರ ಮೇನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಒಟ್ಟಾರೆ ಭದ್ರತಾ ಸ್ಥಿತಿಯ ಬಗ್ಗೆ ಸೇನೆಯ ಹಿರಿಯ ಅಧಿಕಾರಿಗಳು, ರಕ್ಷಣಾ ಸಚಿವ ಎ.ಕೆ.ಅಂಟನಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು, ರಕ್ಷಣಾ ಇಲಾಖೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ವಿ.ಕೆ. ಸಾರಸ್ವತ್ ಜತೆ ಸಮಾಲೋಚನೆ ನಡೆಸಿದ್ದರು.

ಭದ್ರತೆಗಾಗಿ ಭಾರತದ ಹೆಜ್ಜೆಗಳು...

* ‘ಎಸ್‌–400’ ಖರೀದಿ ಒಪ್ಪಂದಕ್ಕೆ ಭಾರತ–ರಷ್ಯಾ ಸಹಿ
2018ರ ಅಕ್ಟೋಬರ್‌ನಲ್ಲಿ ಭಾರತ ಮತ್ತು ರಷ್ಯಾ ಎಸ್–400 ಟ್ರಯಂಫ್ ವಾಯುಪ್ರದೇಶ ರಕ್ಷಣಾ ಕ್ಷಿಪಣಿ (ಏರ್‌ಡಿಫೆನ್ಸ್ ಸಿಸ್ಟಂ) ಖರೀದಿ ಒಪ್ಪಂದಕ್ಕೆ ಸಹಿಹಾಕಿದವು. ₹40 ಸಾವಿರ ಕೋಟಿ ಮೊತ್ತದ ಈ ಒಪ್ಪಂದದಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಹೊಸ ಬಲ ಬಂದಂತೆ ಆಗಿದೆ.

* ಭಾರತಕ್ಕೆ ಇದು ಏಕೆ ಬೇಕು?

ಖರೀದಿ ಒಪ್ಪಂದಕ್ಕೆ ಭಾರತ ಮನಸ್ಸು ಮಾಡಲು ಇರುವ ಮುಖ್ಯ ಕಾರಣ ಪಾಕಿಸ್ತಾನ ಮತ್ತು ಚೀನಾಗಳಿಂದ ಇರುವ ಆತಂಕ. ಈ ಎರಡೂ ದೇಶಗಳು ಮುಂದೆ ಎಂದಾದರೂ ಕೈಕೈ ಮಿಲಾಯಿಸಿ ಭಾರತದ ಮೇಲೆ ಮುಗಿಬಿದ್ದು ಕ್ಷಿಪಣಿ ದಾಳಿ ನಡೆಸಿದರೆ ಅದನ್ನು ಎದುರಿಸಲು ಸನ್ನದ್ಧವಾಗಿರಬೇಕು ಎಂಬುದು ರಕ್ಷಣಾ ಪಂಡಿತರ ಅಭಿಪ್ರಾಯ. ಅದಕ್ಕಾಗಿ ಎಸ್‌–400 ಮಾದರಿಯ ಕ್ಷಿಪಣಿ ನಿರೋಧಕ ವ್ಯವಸ್ಥೆ ನಮ್ಮಲ್ಲಿ ಇರಬೇಕು ಎಂದು ಹಲವು ಚಿಂತಕರು ಅಭಿಪ್ರಾಯಪಟ್ಟಿದ್ದರು.

ಎಸ್‌–400 ಟ್ರಯಂಪ್ ಕ್ಷಿಪಣಿ ಖರೀದಿ ಮಾತುಕತೆಗೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದ್ದು, ರಷ್ಯಾದಿಂದ ರಕ್ಷಣಾ ಸಾಮಗ್ರಿ ಖರೀದಿಸಿದರೆ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

‘ನಮ್ಮ ಎಲ್ಲ ಮಿತ್ರ ರಾಷ್ಟ್ರಗಳಿಗೂ ಇದು ಅನ್ವಯವಾಗಲಿದೆ. ರಷ್ಯಾದಿಂದ ಭಾರತವು ಎಸ್‌–400 ಟ್ರಯಂಪ್ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಿದರೆ, ಭಾರತವೂ ನಿರ್ಬಂಧಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯ ಕಚೇರಿ ಘೋಷಿದ್ದರು.

ಎಸ್‌–400 ಎಂದರೇನು? ಭಾರತಕ್ಕೆ ಇದು ಏಕೆ ಅತ್ಯಗತ್ಯವಾಗಿತ್ತು? ಈ ಡೀಲ್ ಬಗ್ಗೆ ಅಮೆರಿಕ ಕೆಂಗಣ್ಣು ಬೀರಿದ್ದೇಕೆ? ಜಗತ್ತಿನ ಗಮನ ಸೆಳೆದ ‘ಎಸ್‌–400 ರಷ್ಯಾ–ಭಾರತ ಒಪ್ಪಂದ’ದ ಬಗ್ಗೆ ನೀವು ತಿಳಿಯಲು ಇಚ್ಛಿಸುವ ಮುಖ್ಯ ಅಂಶಗಳು ಇಲ್ಲಿವೆ ನೋಡಿ.

* ರಫೇಲ್‌ ಯುದ್ಧ ವಿಮಾನ ಖರೀದಿಯ ಚರ್ಚೆ

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‌ ಸರ್ಕಾರೊಂದಿಗೆ ನಡೆಸಿರುವ ಮಾತುಕತೆ ಹಾಗೂ ಸಹಿ ಮಾಡಿರುವ ಕುರಿತು ಚರ್ಚೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಸವಾಲು ಹಾಕಿದ್ದ ಬಳಿಕ, ಈ ಕುರಿತಂತೆ ವ್ಯಾಪಕ ಚರ್ಚೆಗಳಾಗುತ್ತಿವೆ.

ಆಕಾಶ್‌ ವಾಯುಪ್ರದೇಶ ರಕ್ಷಣಾ ಕ್ಷಿಪಣಿಯ ಎರಡು ತುಕಡಿಗಳು ಸೇರಿ ಒಟ್ಟು ₹9,100 ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳ ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ರಕ್ಷಣಾ ಖರೀದಿ ಮಂಡಳಿಯು (ಡಿಎಸಿ) 2018ರ ಸೆಪ್ಟೆಂಬರ್‌ನಲ್ಲಿ ಒಪ್ಪಿಗೆ ಕೊಟ್ಟಿದೆ.

* 2017ರ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ₹ 3.6 ಲಕ್ಷ ಕೋಟಿ ನಿಗದಿ ಮಾಡಲಾಗಿತ್ತು. ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 2.1ರಷ್ಟು.

ಭಾರತೀಯ ವಾಯುಪಡೆಯಲ್ಲಿ ಯೋಧರ ಹಾಗೂ ಯುದ್ಧವಿಮಾನಗಳ ಕೊರತೆ ಇದೆ (ವಾಯುಪಡೆಗೆ ಇನ್ನೂ 7ರಿಂದ 10 ಸ್ಕ್ವಾಡ್ರನ್‌ಗಳು ಬೇಕಿವೆ) ಎಂಬ ಬಗ್ಗೆ ಸಾಕಷ್ಟು ಬರೆದಾಗಿದೆ. 10 ಲಕ್ಷ ಸೈನಿಕರಿಗೆ ವೇತನ ನೀಡಲು ಹೆಣಗುತ್ತಿರುವ ಭೂಸೇನೆಯ ಬಗ್ಗೆ ನಾವಿನ್ನೂ ಚರ್ಚಿಸಿಲ್ಲ. ಭೂಸೇನೆಗೆ ಮಾಡುವ ವೆಚ್ಚ ಕಡಿಮೆಯೇ ಇದೆ.

ಬೆಂಕಿ, ಭಯೋತ್ಪಾದಕ ದಾಳಿಯಿಂದ ಸೇನೆಯ ಕ್ಷಿಪಣಿ, ಸ್ಫೋಟಕಗಳು ಮತ್ತು ಬಾಂಬುಗಳ ದಾಸ್ತಾನುಗಳನ್ನು ರಕ್ಷಿಸುವ ಹೊಸ ತಂತ್ರಜ್ಞಾನ ಮತ್ತು ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

* ಗಡಿಯಲ್ಲಿ ‘ಸ್ಮಾರ್ಟ್‌ ಬೇಲಿ’

ಭಾರತ- ಪಾಕಿಸ್ತಾನ ಗಡಿಯಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ 'ಸ್ಮಾರ್ಟ್‌ ಬೇಲಿ'ಯನ್ನು ಗೃಹಸಚಿವ ರಾಜನಾಥ್‌ ಸಿಂಗ್ ಅವರು ಅನಾವರಣಗೊಳಿಸಿದ್ದರು. ತಲಾ 5 ಕಿ.ಮೀ ವ್ಯಾಪ್ತಿಯಲ್ಲಿನ ಈ ಬೇಲಿ ಲೇಸರ್ ಚಾಲಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಅರೆಸೇನಾ ಪಡೆಯು ಇದನ್ನು ಕಾರ್ಯಗತಗೊಳಿಸಿದೆ. ಜಮ್ಮುವಿನ ಮುಂಚೂಣಿ ‍ಪ್ರದೇಶದಲ್ಲಿ ಈ ಬೇಲಿಯನ್ನು ಉದ್ಘಾಟನೆ ಮಾಡಲಾಗಿದೆ.

* ಗಡಿಯಲ್ಲಿ ಭದ್ರತೆ ಹೆಚ್ಚಿಸಲು ಮತ್ತಷ್ಟು ಸೈನಿಕರ ನಿಯೋಜನೆ

ಚೀನಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಗಡಿಗಳಲ್ಲಿ ಭದ್ರತೆ ಹೆಚ್ಚಿಸುವ ಸಲುವಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಾಗೂ ಇಂಡೊ– ಟಿಬೆಟನ್ ಗಡಿ ಪೊಲೀಸ್‌ನ (ಐಟಿಬಿಪಿ) ಹದಿನೈದು ಹೊಸ ತುಕಡಿಗಳನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ.

ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರರ ದಾಳಿಯಾದ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ದುರಂತದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಗಳ ಮುಂದೆ ಮುಂಬೈ ಜನರು ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದರು.
ಮುಂಬೈನ ತಾಜ್ ಹೋಟೆಲ್ ಮೇಲೆ ಉಗ್ರರ ದಾಳಿಯಾದ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ದುರಂತದಲ್ಲಿ ಹುತಾತ್ಮರಾದ ಯೋಧರ ಭಾವಚಿತ್ರಗಳ ಮುಂದೆ ಮುಂಬೈ ಜನರು ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT