ಕಲಬುರ್ಗಿ: ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಬಿಜೆಪಿಯತ್ತ ಮುಖ ಮಾಡಿರುವ ಬೆನ್ನಲ್ಲೇ, ಅವರ ಸಾಂಪ್ರದಾಯಿಕ ಎದುರಾಳಿ, ಮಾಜಿ ಶಾಸಕ ಎಂ.ವೈ. ಪಾಟೀಲ ಅವರು ಕಾಂಗ್ರೆಸ್ನತ್ತ ಮುಖಮಾಡಿದ್ದಾರೆ.
ಭಾನುವಾರ ಅವರು ತಮ್ಮ ಬೆಂಬಲಿಗರ ಸಭೆ ನಡೆಸಿ ಚರ್ಚಿಸಿದರು. ‘ಅಫಜಲಪುರ ಕ್ಷೇತ್ರದ ಬಿಜೆಪಿ ಟಿಕೆಟ್ನನ್ನು ವರಿಷ್ಠರು ನನಗೆ ಖಚಿತ ಪಡಿಸಿದ್ದರು. ಆದರೆ ಮಾಲೀಕಯ್ಯ ಸೇರ್ಪಡೆಯಿಂದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಶಕ್ತಿ ಬರುತ್ತದೆ ಎಂದು ರಾಜ್ಯ ನಾಯಕರು ಈಗ ಹೇಳುತ್ತಿದ್ದಾರೆ. ಏನೇ ಆದರೂ ನನ್ನ ರಾಜಕೀಯ ಜೀವನ ಮಾಲೀಕಯ್ಯ ವಿರುದ್ಧವಾಗಿಯೇ ಇರುತ್ತದೆ. ಯಾವುದೇ ಕಾರಣಕ್ಕೂ ಅವರೊಂದಿಗೆ ಹೊಂದಾಣಿಕೆ ಇಲ್ಲ. ಅಂತಹ ಸಂದರ್ಭ ಬಂದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಪಾಟೀಲ ಹೇಳಿದರು.
‘ಕ್ಷೇತ್ರದಲ್ಲಿ ತಾನೇ ರಾಜ, ಮುಖ್ಯಮಂತ್ರಿ, ತಾನೇ ಚಿಹ್ನೆ, ತನ್ನದೇ ಆಟ ಎಂಬಂತೆ ಮಾಲೀಕಯ್ಯ ವರ್ತಿಸುತ್ತಿದ್ದಾರೆ. ಇದು ಮತದಾರರಿಗೆ ಮಾಡುವ ಅವಮಾನವಾಗಿದೆ. ಬರುವ ದಿನಗಳಲ್ಲಿ ಮಾಲೀಕಯ್ಯ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಸಿದರು.