ನವದೆಹಲಿ (ಪಿಟಿಐ): ‘ಕಳೆದ ಎರಡು ತಿಂಗಳಲ್ಲಿ ಸುಮಾರು 15 ಲಕ್ಷ ಪ್ರಯಾಣಿಕರು ವಿವಿಧ ದೇಶಗಳಿಂದ ಭಾರತವನ್ನು ಪ್ರವೇಶಿಸಿದ್ದಾರೆ’ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ತಿಳಿಸಿದ್ದಾರೆ.
‘ಜನವರಿ 18 ಮತ್ತು ಮಾರ್ಚ್ 23ರ ನಡುವೆ ಇಷ್ಟು ಸಂಖ್ಯೆಯ ಪ್ರಯಾಣಿಕರು ದೇಶವನ್ನು ಪ್ರವೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಅಂತರರಾಷ್ಟ್ರೀಯ ಪ್ರಯಾಣಿಕರ ವಿರುದ್ಧದ ಕಣ್ಗಾವಲನ್ನು ಇನ್ನಷ್ಟು ಬಿಗಿಗೊಳಿಸಬೇಕು’ ಎಂದು ರಾಜ್ಯಗಳಿಗೆ ಅವರು ಸಲಹೆ ಮಾಡಿದ್ದಾರೆ.
ಈ ಕುರಿತು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಎಲ್ಲ ಪ್ರಯಾಣಿಕರ ಮೇಲೆ ಕಣ್ಗಾವಲು ಇಡದಿದ್ದರೆ ಕೋವಿಡ್–19 ತಡೆಯಲು ಕೈಗೊಂಡಿರುವ ಕ್ರಮಗಳು ವಿಫಲವಾಗಲಿದ್ದು, ಪರಿಸ್ಥಿತಿ ಅಸ್ತವ್ಯಸ್ತವಾಗಬಹುದು ಎಂದಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯತತ್ಪರರಾಗಬೇಕು ಎಂದು ಅವರು ಸೂಚಿಸಿದ್ದಾರೆ.
ವಿದ್ಯುನ್ಮಾನ ವೇದಿಕೆ ರೂಪಿಸಲು ಭಾರತದ ಕ್ರಮ: ಕೋವಿಡ್ -19 ಸವಾಲುಗಳನ್ನು ಜಂಟಿಯಾಗಿ ಹಾಗೂ ಪರಿಣಾಮಕಾರಿಯಾಗಿ ಎದುರಿಸಲು ಸಾರ್ಕ್ ದೇಶಗಳಿಗಾಗಿ ಆನ್ಲೈನ್ನಲ್ಲಿ ಸಮಾನ ವಿದ್ಯುನ್ಮಾನ ವೇದಿಕೆಯನ್ನು ರೂಪಿಸಲು ಭಾರತ ಮುಂದಾಗಿದೆ.
ಸಾರ್ಕ್ ಸದಸ್ಯ ರಾಷ್ಟ್ರಗಳ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳ ನಡುವೆ ನಡೆದ ವಿಡಿಯೊ ಸಂವಾದಲ್ಲಿ ಭಾರತ ಈ ಪ್ರಸ್ತಾಪ ಮುಂದಿಟ್ಟಿದೆ.ಸಾರ್ಕ್ ಸಮೂಹದಲ್ಲಿ ಭಾರತ ವಲ್ಲದೆ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿವೆ.
ಉದ್ದೇಶಿತ ವೇದಿಕೆ ರೂಪಿಸುವ ಪ್ರಕ್ರಿಯೆ ಆಗಲೇ ಆರಂಭವಾಗಿದೆ. ಸಾರ್ಕ್ ಸದಸ್ಯ ರಾಷ್ಟ್ರಗಳ ಆರೋಗ್ಯ ಸಚಿವಾಲಯಗಳ ಪ್ರಮುಖರು, ಪರಿಣತರ ಇ-ಮೇಲ್/ವಾಟ್ಸ್ ಆಪ್ ಗುಂಪು ರಚಿಸುವುದೂ ಇದರಲ್ಲಿ ಸೇರಿದೆ. ಇಂಥ ಕ್ರಮಗಳು ತ್ವರಿತವಾಗಿ ಪೂರಕ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಸಹಕಾರಿ ಆಗಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.