ಅಮರಾವತಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟವನ್ನುಶನಿವಾರ ವಿಸ್ತರಿಸಿದರು.25 ಶಾಸಕರಿಗೆ ಅವರು ಸಚಿವ ಸ್ಥಾನ ನೀಡಿದ್ದಾರೆ.ಚುನಾವಣೆ ಭರವಸೆಯಂತೆ ಹಿಂದುಳಿದವರು, ಪರಿಶಿಷ್ಟರನ್ನು ಪ್ರತಿನಿಧಿಸುವ ಶಾಸಕರಿಗೆ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದಾರೆ.
ಪಮುಲಾ ಪುಷ್ಪಾ ಶ್ರೀವಾಣಿ, ಪಿಲ್ಲಿ ಸುಭಾಷ್ಚಂದ್ರ ಬೋಸ್, ಅಲ್ಲಾ ನಾನಿ, ಕೆ.ನಾರಾಯಣ ಸ್ವಾಮಿ, ಅಮ್ಜದ್ ಭಾಶಾ ಶೇಖ್ ಬೇಪರಿ ನೂತನ ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಮೇಕಟೊಟಿ ಸುಚಾರಿತಾ ರಾಜ್ಯದ ನೂತನ ಗೃಹ ಸಚಿವರಾಗಿದ್ದಾರೆ.
ಮುಂದುವರಿದ ಜಾತಿಗಳನ್ನು ಪ್ರತಿನಿಧಿಸುವ 11,ಹಿಂದುಳಿದ ವರ್ಗದ ಏಳು, ಪರಿಶಿಷ್ಟ ಜಾತಿಯ 5, ಪರಿಶಿಷ್ಟ ವರ್ಗ ಮತ್ತು ಮುಸ್ಲಿಂ ಸಮುದಾಯದ ತಲಾ ಒಬ್ಬರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.ರೆಡ್ಡಿ ಸಮುದಾಯದ ನಾಲ್ವರಿಗಷ್ಟೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ವೆಲಗಪುಡಿಯಲ್ಲಿರುವ ರಾಜ್ಯ ಸಚಿವಾಲಯದ ಸಂಕೀರ್ಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಎಸ್.ವೆಂಕಟಚಿನ್ನ ಅಪ್ಪಾಲ ನಾಯ್ಡು ಅವರು ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ಸ್ವೀಕರಿಸಿದರು.
ಕಡತಗಳಿಗೆ ಸಹಿ: ಇದಕ್ಕೂ ಮುನ್ನ ಜಗನ್ ಮೋಹನ್ ರೆಡ್ಡಿ ವೇದ–ಮಂತ್ರ ಘೋಷದ ನಡುವೆಯೇ ಬೆಳಿಗ್ಗೆ ಸಚಿವಾಲಯದ ಮೊದಲ ಬ್ಲಾಕ್ನಲ್ಲಿರುವ ಕಚೇರಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯಾಗಿ ಮೇ 30ರಂದು ವಿಜಯವಾಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.
ಅಧಿಕಾರ ವಹಿಸಿಕೊಂಡ ದಿನ ಮೊದಲನೆಯದಾಗಿ ಆಶಾ ಕಾರ್ಯಕರ್ತರ ಗೌರವಧನ ಏರಿಕೆ, ಎಕ್ಸ್ಪ್ರೆಸ್ ಹೆದ್ದಾರಿ ಹಾಗೂ ಪತ್ರಕರ್ತರ ಆರೋಗ್ಯ ಯೋಜನೆಗೆ ಸಂಬಂಧಿಸಿದ ಮೂರು ಕಡತಗಳಿಗೆ ಸಹಿ ಹಾಕಿದರು.
ರೆಡ್ಡಿ ಸಮುದಾಯಕ್ಕೆ ಸೀಮಿತ ಪ್ರಾತಿನಿಧ್ಯ:‘ಕಷ್ಟಕಾಲದಲ್ಲಿ ಜೊತೆಗಿದ್ದವರು ಸೇರಿದಂತೆ ಹಿಂದುಳಿದ ಎಲ್ಲ ಸಮುದಾಯಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಮೂಲಕ ಜಗನ್ ರೆಡ್ಡಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಂಪುಟ ವಿಸ್ತರಣೆಯ ಪ್ರಕ್ರಿಯೆಯನ್ನು ರಾಜಕೀಯ ವಲಯದಲ್ಲಿ ಬಣ್ಣಿಸಲಾಗಿದೆ.
ರೆಡ್ಡಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ದೊರೆತಿಲ್ಲ ಎಂಬ ಬೇಸರವೂ ವ್ಯಕ್ತವಾಗಿದೆ. ರೆಡ್ಡಿ ಸಮುದಾಯಕ್ಕೆ ಸೇರಿದ ಶಾಸಕಿ ರೋಜಾ ಈ ಬೆಳವಣಿಗೆಯಿಂದ ಬೇಸರಗೊಂಡು ಶುಕ್ರವಾರ ರಾತ್ರಿಯೇ ವಿಜಯವಾಡದಿಂದ ನಿರ್ಗಮಿಸಿದ್ದರು.ನೂತನ ಸಂಪುಟದಲ್ಲಿ ಮೂವರು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.