ನವದೆಹಲಿ, ಡಿ. 12– ಚೀನಾ ಮತ್ತು ಪಾಕಿಸ್ತಾನದ ಜತೆ ಇರುವ ವಿವಾದ ಇತ್ಯರ್ಥಕ್ಕೆ ಹೊಸ ಶಾಂತಿ ಯತ್ನಕ್ಕಿಂತ ‘ಹತ್ತಿರದ ದಾರಿ’ ಇಲ್ಲ ಎಂದು ರಕ್ಷಣಾ ಸಚಿವ ಸ್ವರಣ್ ಸಿಂಗ್ ಇಂದು ಲೋಕಸಭೆಯಲ್ಲಿ ಘೋಷಿಸಿದರು.
ಪಾಕಿಸ್ತಾನ, ಚೀನಾಗಳೆರಡೂ ಭಾರತಕ್ಕೆ ಬೆದರಿಕೆಯನ್ನೊಡ್ಡಿವೆ. ಶಾಂತಿ ನೆಲೆಸುತ್ತದೆ ಎನ್ನುವ ಭರವಸೆಯಿಂದ ನಮ್ಮ ಯತ್ನವನ್ನು ಮುಂದುವರೆಸಬೇಕು. ಆದರೆ ಯುದ್ಧ ಅನಿವಾರ್ಯವಾದರೆ ಅದಕ್ಕೂ ಸಿದ್ಧರಾಗಿರಬೇಕು ಎಂದು ಸ್ವರಣ್ ಸಿಂಗ್ ಹೇಳಿದರು.
ನಾಡಿನ ಭವ್ಯ ಪರಂಪರೆ ಉಳಿಸಲು ಕರೆ
ಬೆಂಗಳೂರು, ಡಿ. 12– ಲೇಖನಿ ಹಿಡಿದ ಸೋದರಿಯರು, ಮಾತೆಯರು ಇಂದು ಪುರಭವನದಲ್ಲಿ ಸಮಾವೇಶಗೊಂಡು ಪುಟ್ಟ ಸಾಹಿತ್ಯೋತ್ಸವವನ್ನು ನಡೆಸಿದರು. ಸಂದರ್ಭ: ‘ಕಥಾಪಲ್ಲವ’ ಪ್ರಕಾಶನ.
ಹಿರಿಯ–ಕಿರಿಯ ಲೇಖಕಿಯರು ರಚಿಸಿದ 77 ವಿಶೇಷ ಸಣ್ಣ ಕತೆಗಳು 387 ಪುಟಗಳಲ್ಲಿ ಪ್ರವಹಿಸಿರುವ ಅದನ್ನು ಸಮಾಜ ಕಲ್ಯಾಣ ಉಪಸಚಿವೆ ಶ್ರೀಮತಿ ಬಸವರಾಜೇಶ್ವರಿ ಅವರು ಬಿಡುಗಡೆ ಮಾಡಿ ಕನ್ನಡ ನಾಡಿನ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಲೇಖಕಿಯರಿಗೆ ಕರೆಯಿತ್ತರು.
ಮನೆಗಂದಾಯ ಏರಿಕೆ?
ಬೆಂಗಳೂರು, ಡಿ. 12– ನಗರದಲ್ಲಿ ಆಕ್ಟ್ರಾಯ್ ತೆರಿಗೆಯನ್ನು ರದ್ದುಗೊಳಿಸಿದರೆ ಮನೆಗಂದಾಯವನ್ನು ಹೆಚ್ಚಿಸುವ ಸಾಧ್ಯತೆ ಬಗ್ಗೆ ಸರಕಾರ ಪರಿಶೀಲಿಸುತ್ತಿದೆಯೆಂದು ಗೊತ್ತಾಗಿದೆ.
ಎಥೆಲ್ ಕೆನಡಿಗೆ ಹೆಣ್ಣು ಮಗು
ವಾಷಿಂಗ್ಟನ್, ಡಿ. 12– ದಿವಂಗತ ರಾಬರ್ಟ್ ಎಫ್. ಕೆನಡಿ ಅವರ ಪತ್ನಿ ಎಥೆಲ್ ಕೆನಡಿ ತಮ್ಮ 11ನೇ ಮಗುವಿಗೆ (ಹೆಣ್ಣು ಮಗು) ಇಂದು ಜನ್ಮವಿತ್ತರು.
‘ಫೀಜೊ ಜತೆ ಸಂಧಾನ ನಡೆಸುವುದಿಲ್ಲ’
ನವದೆಹಲಿ, ಡಿ. 12– ನಾಗಾ ದಂಗೆಕೋರರ ನಾಯಕ ಫೀಜೊ ಜತೆ ಭಾರತ ಸರ್ಕಾರವು ಸಂಧಾನ ನಡಸುವುದಿಲ್ಲವೆಂದು ಪ್ರಧಾನಿ ಇಂದಿರಾ ಗಾಂಧಿಯವರು ರಾಜ್ಯಸಭೆಯಲ್ಲಿ ಇಂದು ಭರವಸೆ ಇತ್ತರು.