ಮುಂಬೈ: ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಸಾರ್ವಜನಿಕ ಸಮಾರಂಭವೊಂದರ ವೇದಿಕೆಯಲ್ಲಿಯೇ ಕುಸಿದು ಬಿದ್ದರು.
ಅಹಮದನಗರ ಜಿಲ್ಲೆಯ ರಾಹುರಿಯಲ್ಲಿನ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಗಡ್ಕರಿ ಕುಸಿದು ಬಿದ್ದರು. ಪಕ್ಕದಲ್ಲಿದ್ದ ಗಣ್ಯರು ಅವರನ್ನು ಮೇಲೆ ಎತ್ತಿ ಉಪಚರಿಸಿದರು. ಕೂಡಲೇ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ ನಡೆಸಿತು.
'ಸಮಾರಂಭದಲ್ಲಿ ಉಸಿರುಗಟ್ಟಿದಂತಾಯಿತು. ಪೆಂಡಾಲ್ನಲ್ಲಿ ಗಾಳಿ ಕೊರತೆ ಇತ್ತು. ನಾನು ಘಟಿಕೋತ್ಸವದ ನಿಲುವಂಗಿ ಧರಿಸಿದ್ದೆ. ಹೀಗಾಗಿ, ಕುಸಿದು ಬಿದ್ದೆ. ನನ್ನ ಆರೋಗ್ಯ ಈಗ ಸರಿಯಾಗಿದೆ. ರಕ್ತದ ಒತ್ತಡ ಅಥವಾ ಸಕ್ಕರೆಯ ಯಾವುದೇ ಸಮಸ್ಯೆ ಈಗ ಇಲ್ಲ’ ಎಂದು ಗಡ್ಕರಿ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕಿಂತ ಮೊದಲು ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿದ್ದರಿಂದ ಈ ರೀತಿ ಘಟನೆ ನಡೆಯಿತು ಎಂದು ಗಡ್ಕರಿ ಟ್ವೀಟ್ ಮಾಡಿದ್ದರು.
‘ಸಕ್ಕರೆ ಅಂಶ ಕಡಿಮೆಯಾಗಿದ್ದರಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಯಿತು. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆರೋಗ್ಯ ವಿಚಾರಿಸಿದ ಎಲ್ಲರಿಗೂ ಧನ್ಯವಾದ’ ಎಂದು ಟ್ವೀಟ್ನಲ್ಲಿ ತಿಳಿಸಿದ್ದರು.