ನವದೆಹಲಿ: ಈ ಬಾರಿಯ 70ನೇ ಗಣರಾಜ್ಯೋತ್ಸವದಲ್ಲಿ ಮಹಿಳಾ ಶಕ್ತಿ ಅನಾವರಣಗೊಂಡಿತು. ರಾಜಪಥದಲ್ಲಿ ನಡೆದ ಪೆರೇಡ್ನಲ್ಲಿ ನೌಕಾಪಡೆ, ವಾಯುಪಡೆ ತುಕಡಿಗಳನ್ನು ಮುನ್ನಡೆಸಿದ್ದು ಮಹಿಳೆಯರೇ.
ಬರೀ ಮಹಿಳೆಯರಿಂದಲೇ ಕೂಡಿರುವ ಅಸ್ಸಾಂ ರೈಫಲ್ಸ್ ತುಕಡಿಯು ರಾಜಪಥದಲ್ಲಿ ಮೊದಲ ಬಾರಿಗೆ ಹೆಜ್ಜೆಹಾಕಿ ಇತಿಹಾಸ ನಿರ್ಮಿಸಿತು. ಮಾಜ್ ಖುಷ್ಬೂ ಕನ್ವಾರ್ ಅವರ ತಂಡದ ನೇತೃತ್ವ ವಹಿಸಿದ್ದರು.
ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್ ತಂಡದ ಕ್ಯಾಪ್ಟನ್ ಶಿಖಾ ಸುರಭಿ ಅವರು ನಡೆಸಿಕೊಟ್ಟ ಬೈಕ್ ಸ್ಟಂಟ್ ಮೈನವಿರೇಳಿಸಿತು.
ಗಣರಾಜ್ಯೋತ್ಸವಕ್ಕೆ ವಿಶೇಷ ಕಳೆ ತುಂಬಿದ್ದು ವೈಮಾನಿಕ ಪ್ರದರ್ಶನ. ಅಮೆರಿಕದ ಹೌರಿಟ್ಜ್ ಎಂ–777, ಟಿ–90 ಟ್ಯಾಂಕ್, ಸಿ–130ಜೆ ಸೂಪರ್ ಹರ್ಕ್ಯೂಲಸ್ ಹೆಲಿಕಾಪ್ಟರ್, ಜಾಗ್ವಾರ್ ಸೇರಿದಂತೆ ಹತ್ತಾರು ಯುದ್ಧವಿಮಾನಗಳು ಆಗಸದಲ್ಲಿ ಮೋಡಿ ಮಾಡಿದವು.
ದಕ್ಷಿಣ ಆಫ್ರಿಕಾ ಅಧ್ಯಕ್ಷ ಸೈರಿಲ್ ರಾಮಪೊಸ ಅವರು ಈ ಬಾರಿ ಅತಿಥಿಯಾಗಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಕಳೆದ ಬಾರಿ ರಾಹುಲ್ಗೆ ಆರನೇ ಸಾಲಿನಲ್ಲಿ ಕುಳಿತುಕೊಳ್ಳಲು ಜಾಗ ನಿಗದಿ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.
ಉಗ್ರರ ಎನ್ಕೌಂಟರ್
ಶ್ರೀನಗರ: ಗಣರಾಜ್ಯೋತ್ಸವ ಪರೇಡ್ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದ ಉಗ್ರರನ್ನು ಭದ್ರತಾಪಡೆಗಳು ಶನಿವಾರ ಹೊಡೆದುರುಳಿಸಿವೆ.
ಶ್ರೀನಗರ ಹೊರವಲಯದ ಖುನ್ಮೋಹ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಉಗ್ರರು ಪೊಲೀಸರತ್ತ ಗುಂಡು ಹಾರಿಸಿದರು. ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜಪಥದಲ್ಲಿ 90 ವರ್ಷದ ಐಎನ್ಎ ಯೋಧರು!
ಭಾರತ ರಾಷ್ಟ್ರೀಯ ಸೇನೆಯ (ಐಎನ್ಎ) ನಾಲ್ವರು ಯೋಧರು ಈ ಬಾರಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದು ವಿಶೇಷ. 90 ವರ್ಷ ವಯಸ್ಸಿನ ಯೋಧರು ತೆರೆದ ಜೀಪ್ನಲ್ಲಿ ಕೈಬೀಸುತ್ತಾ ಮೆರವಣಿಗೆಗೆ ಕಳೆ ತುಂಬಿದರು. ಪರಮಾನಂದ, ಲಾಲ್ತಿ ರಾಮ್, ಹೀರಾ ಸಿಂಗ್ ಮತ್ತು ಭಾಗ್ಮಲ್ ಅವರಿಗೆ ನೆರದಿದ್ದ ಜನರಿಂದ ಚೆಪ್ಪಾಳೆಯ ಸುರಿಮಳೆ ಸಿಕ್ಕಿತು. ಐಎನ್ಎ ಯೋಧರು ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಂಡಿದ್ದು ಇದೇ ಮೊದಲು.
ಐಎನ್ಎ ನೇತೃತ್ವ ವಹಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ವಿರುದ್ಧ ಹೋರಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.