ಚೆನ್ನೈ (ಪಿಟಿಐ): ತೈಲ ಮಾರಾಟ ಕಂಪೆನಿಗಳ ಪ್ರತಿನಿಧಿಗಳು, ಮುಷ್ಕರ ನಿರತ ಎಲ್ಪಿಜಿ ಟ್ಯಾಂಕರ್ ಹಾಗೂ ಲಾರಿ ಮಾಲೀಕರ ಜತೆ ಸರ್ಕಾರ ನಡೆಸಿದ ಸಂಧಾನ ಮಾತುಕತೆ ಫಲಪ್ರದವಾಗಿದ್ದು, ಲಾರಿ ಮಾಲೀಕರು ಕಳೆದ ಹಲವು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಗುರುವಾರ ಕೈಬಿಟ್ಟಿದ್ದಾರೆ.
ತೈಲ ಕಂಪೆನಿಯ ಪ್ರತಿನಿಧಿಗಳು ಮತ್ತು ಲಾರಿ ಮಾಲೀಕರ ಜತೆ ಸರ್ಕಾರ ಸತತ 10 ಗಂಟೆಗಳ ಕಾಲ ನಡೆಸಿದ ಮಾತುಕತೆ ನಂತರ ಈ ನಿರ್ಧಾರ ಹೊರಬಿದ್ದಿದೆ. ಇದರಿಂದ, ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಬಗ್ಗೆ ಆತಂಕಕ್ಕೆ ಒಳಗಾಗಿದ್ದ ದಕ್ಷಿಣದ ರಾಜ್ಯಗಳ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಬಾಡಿಗೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸುಮಾರು 500ಕ್ಕೂ ಹೆಚ್ಚು ಎಲ್ಪಿಜಿ ಟ್ಯಾಂಕರ್, ಲಾರಿ ಮಾಲೀಕರು ಫೆ. 29ರಿಂದ ಏಕಾಏಕಿ ಮುಷ್ಕರ ಆರಂಭಿಸಿದ ಕಾರಣ, ಸಿಲಿಂಡರ್ ಪೂರೈಕೆ ಏರುಪೇರಾಗಿತ್ತು.