ಕೊಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿರುವ ಪಾರಾಗನಾಸ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ಹಿರಿಯ ದಂಪತಿಗಳು ಲಾಕ್ಡೌನ್ನಿಂದಾಗಿ ಕಂಗೆಟ್ಟು ಹಸಿವಿನಿಂದ ಬಳಲುತ್ತಿದ್ದಾಗ ಅಲ್ಲಿನ ಮುಸ್ಲಿಂ ಯುವಕರು ಬಂದು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪೂರ್ಣೇಂದುಶೇಖರ್ ಮುಖೋಪಾಧ್ಯಾಯ್ ಮತ್ತು ಅವರ ಪತ್ನಿ ಲಲಿತ್ ಬಾಲಾ ಮುಖೋಪಾಧ್ಯಾಯ್ ಕಳೆದ ಕೆಲವು ವರ್ಷಗಳಿಂದ ಭಾಂಗರ್ 2ನೇ ಹಂತದಲ್ಲಿರುವ ಅರಣ್ಯದ ಪಕ್ಕ ಗುಡಿಸಲೊಂದರಲ್ಲಿ ವಾಸವಾಗಿದ್ದಾರೆ. ಈ ಹಿರಿಯ ದಂಪತಿಗಳನ್ನು ಅವರ ಮಗ ಮನೆಯಿಂದ ಹೊರಹಾಕಿದ್ದ ಎನ್ನಲಾಗಿದೆ.
ಪೂರ್ಣೇಂದುಶೇಖರ್ ಅವರು ಅರ್ಚಕರಾಗಿದ್ದು ಹತ್ತಿರದ ಸ್ಥಳಗಳಲ್ಲಿ ಪೂಜೆ ಮಾಡಿ ದಿನನಿತ್ಯದ ಜೀವನ ಸಾಗಿಸುತ್ತಿದ್ದರು. ಲಾಕ್ಡೌನ್ನಿಂದಾಗಿ ನಿತ್ಯ ಕಾಯಕವೂ ನಿಂತು ಹೋಗಿ, ಸಂಪಾದನೆಯೇ ಇಲ್ಲವಾಯಿತು. ಕ್ಯಾಟರಾಕ್ಟ್ನಿಂದಾಗಿ ದೃಷ್ಟಿ ಕಡಿಮೆ ಇದೆ. ಪತ್ನಿಗೆ ಸಂಧಿನೋವು ಕೂಡಾ.
ಹತ್ತಿರದ ಸ್ಥಳಗಳಲ್ಲಿ ಪೂಜೆಗಳನ್ನು ಮಾಡಿ ಸಂಪಾದನೆ ಮಾಡುತ್ತಿದ್ದೆ. ಲಾಕ್ಡೌನ್ನಿಂದಾಗಿ ಅದು ನಿಂತು ಹೋಗಿದೆ, ನಾವು ಮಂಡಕ್ಕಿ ತಿಂದುಬದುತ್ತಿದ್ದೇವೆ ಎಂದು ಮುಖೋಪಾಧ್ಯಾಯ್ ಹೇಳಿದ್ದಾರೆ.
ಈ ಹೊತ್ತಲ್ಲಿ ನಮ್ಮ ನೆರವಿಗೆ ಬಂದಿದ್ದು ಸ್ಥಳೀಯ ಮುಸ್ಲಿಂ ಹುಡುಗರು. ಮೊಫಿಜುಲ್ ಮೊಲ್ಲಾ, ಜಿಯಾವುಲ್ ಮೊಲ್ಲಾ, ಅಜಾನ್ ಅಲಿ ಮತ್ತು ಅವರ ಸ್ನೇಹಿತರು ಟ್ರಕ್ಗಳಿಗೆ ಲೋಡಿಂಗ್, ಅನ್ಲೋಡಿಂಗ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ನಿಂದಾಗಿ ಅವರಿಗೂ ಕೆಲಸವಿಲ್ಲ.
ಆದರೂ ಅವರ ಕಷ್ಟದ ನಡುವೆ ನಮಗೆ ಸಹಾಯ ಮಾಡಿದ್ದಾರೆ. ₹500 ನೀಡಿದ ಅವರು ಸ್ನೇಹಿತರ ಜತೆ ಸೇರಿ ₹1,500 ಸಂಗ್ರಹಿಸಿ ಮನೆಗೆ ಬೇಕಾದ ವಸ್ತುಗಳ ಖರೀದಿಗೆ ಹಣ ನೀಡಿದ್ದಾರೆ. ಅವರ ಪರಿಸ್ಥಿತಿ ನೋಡಿ ಕಣ್ಣು ಹನಿಗೂಡಿತು.ನಮ್ಮ ಕೈಲಾದ ಸಹಾಯವನ್ನು ಮಾಡಿದ್ದು, ಅವರಿಗೆ ಸಹಾಯ ಮಾಡುವಂತೆ ಸ್ಥಳೀಯ ಸಂಸ್ಥೆಗೆ ವಿನಂತಿ ಮಾಡಿದ್ದೇವೆ ಎಂದು ಜಿಯಾವುಲ್ ಹೇಳಿದ್ದಾರೆ.
ಯುವಕರು ನೀಡಿದ ಸಹಾಯಧನ ಮುಗಿಯುತ್ತಿದ್ದಂತೆಯೇ ಸ್ಥಳೀಯ ಸಂಸ್ಥೆ ಮುಖೋಪಾಧ್ಯಾಯ್ ಅವರ ನೆರವಿಗೆ ಬಂದಿದೆ.ಆ ಯುವಕರಿಗೆ ನಾವು ಕೃತಜ್ಞತೆ ಮಾತ್ರ ಸಲ್ಲಿಸಬಲ್ಲೆವು ಎಂದು ಮುಖೋಪಾಧ್ಯಾಯ್ ಹೇಳಿದ್ದಾರೆ.