ನವದೆಹಲಿ: ಆಧಾರ್ ನೋಂದಣಿ ಮತ್ತು ಪರಿಷ್ಕರಣೆಗೆ ಸಂಬಂಧಿಸಿದ ಸೇವೆಗಳಿಗೆ ಗ್ರಾಮೀಣ ಪ್ರದೇಶಗಳ ಸಾಮಾನ್ಯ ಸೇವಾ ಕೇಂದ್ರಗಳಿಗೆ (ಸಿಎಸ್ಸಿ) ಅನುಮತಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಈ ಸೇವೆಗಳಿಗೆ ಅವಕಾಶ ಕೊಡಬೇಕು ಎಂದು ಸಿಎಸ್ಸಿಗಳು ಮನವಿ ಸಲ್ಲಿಸಿದ್ದವು. ಆಧಾರ್ ನೋಂದಣಿ, ಪರಿಷ್ಕರಣೆ ಸೇವೆಯನ್ನು ಸಿಎಸ್ಸಿಗಳಿಂದ ಒಂದು ವರ್ಷದ ಹಿಂದೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹಿಂದಕ್ಕೆ ಪಡೆದಿತ್ತು. ಅಂದಿನಿಂದಲೂಸಿಎಸ್ಸಿಗಳು ಮನವಿ ಮಾಡುತ್ತಲೇ ಇವೆ.
ಸಿಎಸ್ಸಿಗಳನ್ನು ನಿರ್ವಹಿಸುವ ಗ್ರಾಮ ಮಟ್ಟದ ಉದ್ಯಮಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ಈ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯಲಾಗುವುದು ಎಂದು ಭರವಸೆ ನೀಡಿದರು.
ಆಧಾರ್ಗೆ ಸಂಬಂಧಿಸಿದ ಕೆಲಸಗಳಿಗಾಗಿ ಉಪಕರಣ ಖರೀದಿಗೆ ಹೂಡಿಕೆ ಮಾಡಲಾಗಿದೆ. ಸಿಬ್ಬಂದಿಗೆ ತರಬೇತಿ ಸಹ ನೀಡಲಾಗಿದೆ. ಆದರೂ ಸೇವೆ ಒದಗಿಸಲು ಅನುಮತಿ ನೀಡದಿರುವುದಕ್ಕೆ ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದರು.