ಪುಣೆ: ಪ್ರಧಾನಿ ನರೇಂದ್ರ ಮೋದಿ ಶಿರಡಿಗೆ ಭೇಟಿ ನೀಡುವಾಗ ಅವರನ್ನು ತಡೆದು ಶಬರಿಮಲೆ ವಿವಾದವನ್ನು ಚರ್ಚಿಸುವುದಾಗಿ ಹೇಳಿದ್ದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ತಡೆದುಶಬರಿಮಲೆ ವಿವಾದ ಕುರಿತಂತೆ ಚರ್ಚೆ ನಡೆಸುವುದಾಗಿ ಹೇಳಿ ತೃಪ್ತಿ ದೇಸಾಯಿ ಪೊಲೀಸರಿಗೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಮುಂಜಾಗ್ರತವಾಗಿ ಅಹಮದ್ ನಗರದ ಪೊಲೀಸರು ತೃಪ್ತಿ ದೇಸಾಯಿ ಅವರನ್ನು ಬಂಧಿಸಿದ್ದಾರೆ.
ಇಂದು ಬೆಳಗ್ಗೆ ನರೇಂದ್ರ ಮೋದಿ ಶಿರಡಿಗೆ ಆಗಮಿಸಿ,ಸಾಯಿ ಬಾಬಾ ಸಮಾಧಿಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.ಇದೇ ವೇಳೆ ‘ಪ್ರಧಾನ ಮಂತ್ರಿ ಅವಾಸ ಯೋಜನೆ’ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಸಂಜೆ ವೇಳೆಗೆ ಪೊಲೀಸರು ತೃಪ್ತಿ ದೇಸಾಯಿ ಮತ್ತು ಬೆಂಬಲಿಗರನ್ನು ಬಿಡುಗಡೆ ಮಾಡಲಿದ್ದಾರೆ.