ಮುಂಬೈ: ಮಕ್ಕಳ ಅಚ್ಚುಮೆಚ್ಚಿನ ನಿಯತಕಾಲಿಕ ‘ಚಂದಮಾಮ‘ದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಮಾರಾಟ ಮಾಡಲು ‘ಬಾಂಬೆ ಹೈಕೋರ್ಟ್‘ ಆದೇಶಿಸಿದೆ.
ಚಂದಮಾಮ ನಿಯತಕಾಲಿಕವನ್ನು ನಡೆಸುತ್ತಿದ್ದ ಜಿಯೋಡೆಸಿಕ್ ಲಿಮಿಟೆಡ್ ಸಂಸ್ಥೆಯ ಮಾಲೀಕರು ಪ್ರಸ್ತುತ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಜೈಲುಪಾಲಾಗಿದ್ದಾರೆ. ಚಂದಮಾಮ ನಿಯತಕಾಲಿಕೆಯನ್ನು ಮಾರಾಟ ಮಾಡಲು ಯಾವುದೇ ಅಭ್ಯಂತರವಿಲ್ಲ ಹಾಗೂ ಕಂಪೆನಿಯ ನಿರ್ದೇಶಕರು ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಕಂಪೆನಿಯ ಸ್ವತ್ತುಗಳನ್ನು ಮಾರಾಟ ಮಾಡುವುದಕ್ಕೆ ಯಾವುದೇ ಷರತ್ತು ಇಲ್ಲದೆ ಸಮ್ಮತಿ ಸೂಚಿಸಬೇಕು ಎಂದುಬಾಂಬೆ ಹೈಕೋರ್ಟ್ನ್ ನ್ಯಾಯಮೂರ್ತಿ ಎಸ್.ಜೆ. ಕಥಾವಾಲಾ ಸೂಚಿಸಿದ್ದಾರೆ.
ತೆರಿಗೆ ವಂಚನೆ ಹಾಗೂ ಆರ್ಥಿಕ ಅಪರಾಧಗಳ ಪ್ರಕರಣಗಳಲ್ಲಿಜಿಯೋಡೆಸಿಕ್ ಲಿಮಿಟೆಡ್ ಸಂಸ್ಥೆಯ ಮೂವರು ನಿರ್ದೇಶಕರಾದ ಕಿರಣ್ ಪ್ರಕಾಶ್ ಕುಲಕರ್ಣಿ, ಪ್ರಶಾಂತ್ ಮುಲೇಕರ್ ಹಾಗೂ ಚಾರ್ಟೆಡ್ ಅಕೌಂಟೆಂಟ್ ದಿನೇಶ್ ಜಜೋಡಿಯಾ ಅವರು ಜೈಲಿನಲ್ಲಿದ್ದಾರೆ.
2002ರಲ್ಲಿ ಜಾರಿ ನಿರ್ದೇಶನಾಲಯವು ಜಿಯೋಡೆಸಿಕ್ ಕಂಪನಿಯ ₹ 16 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ವಶಪಡಿಸಿಕೊಂಡಿತ್ತು.ಮೂಲಗಳ ಪ್ರಕಾರ ಚಂದಮಾಮ ನಿಯತಕಾಲಿಕವೊಂದೇ25 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.
ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೂ ಮುನ್ನ ಜುಲೈ ತಿಂಗಳಲ್ಲಿನಾಗಿರೆಡ್ಡಿ ಮತ್ತು ಚಕ್ರಪಾಣಿ ಎಂಬುವರು ತೆಲುಗು ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಚಂದಮಾಮ ನಿಯತಕಾಲಿಕವನ್ನು ಪ್ರಕಟಿಸಿದ್ದರು. 90ರ ದಶಕದಲ್ಲಿ ಚಂದಮಾಮ ಸಿಂದಿ, ಶಿಮ್ಲಾ ಮತ್ತು ಸಂಸ್ಕೃತ ಸೇರಿದಂತೆ 13 ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು.
2007ರ ಮಾರ್ಚ್ ತಿಂಗಳಲ್ಲಿ ಚಂದಮಾಮದ ಶೇ 94ರಷ್ಟು ಷೇರುಗಳನ್ನು 10.2 ಕೋಟಿ ರೂಪಾಯಿಗೆಜಿಯೋಡೆಸಿಕ್ ಕಂಪನಿ ಖರೀದಿ ಮಾಡಿತ್ತು. ಈ ವೇಳೆಗೆ ಚಂದಮಾಮ ನಷ್ಟದ ಹಾದಿಯಲ್ಲಿತ್ತು. ಚಂದಮಾಮದ ಪ್ರಸರಣ ಸಂಖ್ಯೆಯೂ ಇಳಿಮುಖವಾಗಿತ್ತು. ಅಲ್ಲದೆ ಜಾಹೀರಾತು ಆದಾಯ ಕೊರತೆಯನ್ನು ಎದುರಿಸುತ್ತಿತ್ತು.
ಜಿಯೋಡೆಸಿಕ್ ಕಂಪೆನಿಯು ವಿದೇಶಿ ಕರೆನ್ಸಿ ಪರಿವರ್ತಕ ಬಾಂಡ್(FCCB)ಗಳ ವ್ವವಹಾರವನ್ನು ನಡೆಸುತ್ತಿತ್ತು.2014ರಲ್ಲಿ 15ಕ್ಕೂ ಹೆಚ್ಚು ಎಫ್ಸಿಸಿಬಿ ಬಾಂಡ್ಗಳನ್ನು ಹೊಂದಿರುವವರಿಗೆ ₹ 1000 ಕೋಟಿ ರೂಪಾಯಿ ನೀಡುವಲ್ಲಿ ಕಂಪನಿ ವಿಫಲವಾಗಿತ್ತು. ಅದೇ ವರ್ಷ ಕಂಪೆನಿ ದಿವಾಳಿಯಾಗಿದೆ ಎಂದು ಹೇಳಿ ತಾತ್ಕಲಿಕವಾಗಿ ಮುಚ್ಚಲಾಗಿತ್ತು.
ತೆರಿಗೆ ವಂಚನೆ ಸೇರಿದಂತೆ ವಿವಿಧ ಆರ್ಥಿಕ ಅಪರಾಧ ಪ್ರಕರಣಗಳ ವಿಚಾರಣೆಯನ್ನುಜಿಯೋಡೆಸಿಕ್ ಕಂಪನಿಯ ನಿರ್ದೇಶಕರು ಎದುರಿಸುತ್ತಿದ್ದಾರೆ. ಒಟ್ಟು 812 ಕೋಟಿ ರೂಪಾಯಿ ವಂಚನೆ ಪ್ರಕರಣ ಇವರ ಮೇಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.