ಬೆಂಗಳೂರು: ಸಹಕಾರಿ ಬ್ಯಾಂಕುಗಳು ನಗರದಲ್ಲಿಯೇ ಕೇಂದ್ರೀಕೃತವಾಗದೇ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಣೆ ಆಗಬೇಕು ಎಂದು ಸಹಕಾರ ಸಂಘಗಳ ಉಪ ನಿಬಂಧಕ ಸಿ.ಪ್ರಸಾದ್ ರೆಡ್ಡಿ ಹೇಳಿದರು.
ಭಾನುವಾರ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕ್ನ 5ನೇ ನೂತನ ಅರಕೆರೆ ಶಾಖೆ ಉದ್ಘಾಟನೇ ವೇಳೆ ಅವರು ಮಾತನಾಡಿದರು
ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಪೈಪೋಟಿ ನೀಡುವುದು ಸಹಕಾರಿ ಬ್ಯಾಂಕ್ಗಳಿಗೆ ಕಷ್ಟಕರವಾಗಿದೆ. ಆದರೂ ಈ ಬ್ಯಾಂಕುಗಳು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿವೆ ಎಂದರು.
ಬ್ಯಾಂಕಿನ ಅಧ್ಯಕ್ಷ ಸದಾಶಿವ ರೆಡ್ಡಿ, ‘ಮಾರ್ಚ್ ಅಂತ್ಯಕ್ಕೆ ₹13.80 ಕೋಟಿ ಷೇರು ಬಂಡವಾಳದೊಂದಿಗೆ, ₹205 ಕೋಟಿ ಠೇವಣಿ ಹೊಂದಿದ್ದು, ಮೂರೂವರೆ ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಗ್ರಾಹಕರ ಅಗತ್ಯಗಳನ್ನು ಪೂರೈಸುವಲ್ಲಿ ನಮ್ಮ ಬ್ಯಾಂಕು ಸಫಲವಾಗಿದೆ’ ಎಂದರು.
ನಿವೃತ್ತ ಐಪಿಎಸ್ ಅಧಿಕಾರಿ ರಾಮಸುಬ್ಬು, ಲಾಭ ಗಳಿಕೆಯೇ ಬ್ಯಾಂಕುಗಳ ಉದ್ದೇಶವಾಗದೇ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.