ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸೋಮವಾರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಟಿಕೆಟ್ ಆಕಾಂಕ್ಷಿಗಳ ಸಂದರ್ಶನ ನಡೆಸಿತು.
ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಎಐಎಡಿಎಂಕೆ ಸಂಚಾಲಕ ಮತ್ತು ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರನ್ನು ಒಳಗೊಂಡ ಪಕ್ಷದ ಸಂಸದೀಯ ಮಂಡಳಿಯು ಅಭ್ಯರ್ಥಿಗಳ ಸಂದರ್ಶನ ನಡೆಸಿತು.
39 ಲೋಕಸಭಾ ಕ್ಷೇತ್ರಗಳ 20 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾದರು. ಪನ್ನೀರ್ಸೆಲ್ವಂ ಅವರ ಪುತ್ರ ಒ.ಪಿ. ರವೀಂಧ್ರನಾಥ್ ಕೂಡ ಥೇನಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಸಂದರ್ಶನಕ್ಕೆ ಹಾಜರಾಗಿದ್ದರು.
18 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಿಂದಲೂ ಪಕ್ಷ ಅರ್ಜಿ ಆಹ್ವಾನಿಸಿತ್ತು. ಸೋಮವಾರ ಸೇಲಂ, ಥೇನಿ, ನೀಲಗಿರಿ, ಕೊಯಮತ್ತೂರು, ತುತ್ತೂಕುಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಸಂದರ್ಶನ ನಡೆದಿದೆ.