ಸಿದ್ದಾಪುರ (ಮಡಿಕೇರಿ): ಸಮೀಪದ ಅವರೆಗುಂದ ಅರಣ್ಯ ವ್ಯಾಪ್ತಿಯ ದುಬಾರೆಯಲ್ಲಿ ಕೆಲವು ದಿನಗಳಿಂದ ಅಸ್ವಸ್ಥಗೊಂಡು ನರಳುತಿದ್ದ ಸುಮಾರು 55 ವರ್ಷದ ಹೆಣ್ಣು ಕಾಡಾನೆ ಶುಕ್ರವಾರ ಮೃತಪಟ್ಟಿದೆ.
ಈ ಬಗ್ಗೆ ಮಾತನಾಡಿರುವ ವೈದ್ಯಾಧಿಕಾರಿ ಮುಜೀಬ್ ಅವರು, ‘ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಪರಿಶೀಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ದೇಹದ ಬಹುತೇಕ ಭಾಗದಲ್ಲಿ ಗುಂಡೇಟಿನ ರಂಧ್ರಗಳು ಇದ್ದವು. ಚಿಕಿತ್ಸೆಗೆ ಒಳಪಡಿಸಲಾರದಷ್ಟು ರಕ್ತಸ್ರಾವ ಸಂಭವಿಸಿತ್ತು’ ಎಂದು ತಿಳಿಸಿದ್ದಾರೆ.
ಕಾಡಾನೆಗಳ ಚಲನವಲನ ವೀಕ್ಷಿಸಲು ಅರಣ್ಯ ಇಲಾಖೆ ಈಚೆಗೆ ಕೆಲವು ಹೆಣ್ಣು ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಿತ್ತು. ಮೃತಪಟ್ಟಿರುವ ಹೆಣ್ಣಾನೆಗೆ ರೇಡಿಯೊ ಕಾಲರ್ ಅಳವಡಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.