ವಾಷಿಂಗ್ಟನ್: ಪಾಕಿಸ್ತಾನ ಹಾಗೂ ಭಾರತದ ನಡುವೆ ಪರಿಸ್ಥಿತಿ ವಿಷಮಗೊಂಡಿರುವ ಕಾರಣ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರಿಗೆ ಎರಡನೆ ಬಾರಿ ಕರೆ ಮಾಡಿ ಮಾತನಾಡಿದರು.
ಉಭಯ ದೇಶಗಳ ನಡುವೆ ಸದ್ಯ ಇರುವ ಸ್ಥಿತಿಗತಿ ಬಗ್ಗೆ ಬುಧವಾರ ಮಾತುಕತೆ ನಡೆಯಿತು ಎಂದು ತಿಳಿದುಬಂದಿದೆ.
ಫೆಬ್ರುವರಿ 15ರಂದು ಕರೆ ಮಾಡಿದ್ದ ಬಾಲ್ಟನ್, ಅಜರ್ ಮಸೂದ್ನನ್ನು ಜಾಗತಿಕ ಉಗ್ರ ಎಂದು ಪರಿಗಣಿಸಲು ಇರುವ ಎಲ್ಲ ಅಡೆತಡೆಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದರು.
ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಸ್ವರಕ್ಷಣೆಯ ಹಕ್ಕನ್ನು ಅಮೆರಿಕ ಬೆಂಬಲಿಸಿದೆ. ದಾಳಿಗೆ ಕಾರಣರಾದ ಎಲ್ಲರನ್ನೂ ನ್ಯಾಯದ ಕಟಕಟೆಗೆ ತರುವ ಭಾರತದ ಯತ್ನಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದರು.
ಪ್ರಧಾನಿ ಭೇಟಿಯಾದ ಸೌದಿ ರಾಯಭಾರಿ
ನವದೆಹಲಿ: ಸೌದಿ ಅರೇಬಿಯಾದ ರಾಯಭಾರಿ ಡಾ. ಸೌದ್ ಮೊಹಮ್ಮದ್ ಅಲ್–ಸತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು.ಭಾರತ–ಪಾಕಿಸ್ತಾನಗಳ ನಡುವೆ ಉದ್ವಿಗ್ನತೆ ಉಂಟಾಗಿರುವ ವೇಳೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.
ಸೌದಿ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್ ಅವರು ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ್ದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿಭಾರತ ಹಾಗೂ ನೆರೆಯ ದೇಶಗಳಿಗೆ ಸೌದಿ ಅರೇಬಿಯಾ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಲ್ಮಾನ್ ಹೇಳಿದ್ದರು.