ಲಖನೌ: ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಆಂಬುಲೆನ್ಸ್ನಲ್ಲಿ ಗರ್ಭಿಣಿ ಮೃತಪಟ್ಟ ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಉತ್ತರ ಪ್ರದೇಶ ಸರ್ಕಾರವನ್ನು ಭಾನುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಕೊರೊನಾ ರೋಗಿಗಳಿಗೆ ಒಂದು ಲಕ್ಷ ಹಾಸಿಗೆಗಳನ್ನು (ಆಸ್ಪತ್ರೆ ಬೆಡ್) ಸರ್ಕಾರ ಸಜ್ಜುಗೊಳಿಸಿದೆಯೇ? ಹಾಗಾದರೆ ಭವಿಷ್ಯದ ರೋಗಿಗಳಿಗೆಹಾಸಿಗೆಗಳನ್ನು ಏಕೆ ಕಾಯ್ದಿರಿಸಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಎಷ್ಟು ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ ನೀಡುವಂತೆ ಬಿಜೆಪಿ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಎಂಟು ಆಸ್ಪತ್ರೆಗಳಿಗೆ ಅಲೆದಾಡಿದರೂ ಚಿಕಿತ್ಸೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಎಂಟು ತಿಂಗಳ ಗರ್ಭಿಣಿ ಆಂಬುಲೆನ್ಸ್ನಲ್ಲಿ ಶನಿವಾರ ಮೃತಪಟ್ಟಿದ್ದರು. ಈ ಘಟನೆಯ ತನಿಖೆಗೆ ಜಿಲ್ಲಾಡಳಿತ ಆದೇಶಿಸಿದೆ.