ಲಖನೌ: ವಿವಾದಾತ್ಮಕ ತ್ರಿವಳಿ ತಲಾಖ್ ಸುಗ್ರೀವಾಜ್ಞೆಯನ್ನು ಪುನಃ ಜಾರಿಗೆ ತರಲು ಒಪ್ಪಿಗೆ ನೀಡಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್, ‘ಇದು ಅಲ್ಪಸಂಖ್ಯಾತರ ವಿರುದ್ಧದ ಅಸ್ತ್ರವಾಗಿ ಬಳಕೆಯಾಗುತ್ತದೆ’ ಎಂದಿದ್ದಾರೆ.
ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರಕದೆ ಇರುವುದರಿಂದ, ಪುನಃ ಸುಗ್ರೀವಾಜ್ಞೆ ಜಾರಿಗೆ ತರಲು ಕೇಂದ್ರ ಸಂಪುಟ ಸಭೆಯಲ್ಲಿ ಬುಧವಾರ ನಿರ್ಣಯ ಕೈಗೊಳ್ಳಲಾಗಿದೆ.
ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ ಹಾಕಿದ ಬಳಿಕ ಪುನಃ ಜಾರಿಗೆ ಬರಲಿದೆ.
ಇದರ ಅನುಸಾರ, ಪುರುಷರು ತ್ರಿವಳಿ ತಲಾಖ್ ನೀಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
‘ಬಲವಂತದಿಂದ ಸಾಮಾಜಿಕ ಬದಲಾವಣೆ ಸಾಧಿಸಲು ಸಾಧ್ಯವಿಲ್ಲ. ಮಹಿಳೆಯರ ಸಬಲೀಕರಣದ ಕಥೆ ಬಳಸಿಕೊಂಡು, ಈ ಸುಗ್ರೀವಾಜ್ಞೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ನ್ಯಾಯಮೂರ್ತಿ ಸಾಚಾರ್ ವರದಿ ಅನುಷ್ಠಾನಕ್ಕೆ ನಾವು ಬೆಂಬಲಿಸುತ್ತೇವೆ’ ಎಂದು ಯಾದವ್ ಹೇಳಿದ್ದಾರೆ.
2018ರ ಸೆಪ್ಟೆಂಬರ್ನಲ್ಲಿ ತಿದ್ದುಪಡಿ ಮಾಡಲಾಗಿದ್ದ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿತ್ತು. ಆದರೆ ರಾಜ್ಯಸಭೆಯಲ್ಲಿ ಇನ್ನೂ ಸಹ ಅನುಮೋದನೆಗೊಂಡಿಲ್ಲ.