ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಮಧ್ಯಾಹ್ನದಿಂದ ಎಲ್ಲಪೋಸ್ಟ್ ಪೇಯ್ಡ್ ಮೊಬೈಲ್ ಸೇವೆ ಪುನರಾರಂಭಗೊಳ್ಳಲಿದೆ. ರಾಜ್ಯದ ಎಲ್ಲ 10 ಜಿಲ್ಲೆಗಳಲ್ಲಿ ಸೇವೆ ಆರಂಭಿಸಲಾಗುವುದು ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿ ರೋಹಿತ್ ಕನ್ಸಲ್ ಶನಿವಾರ ತಿಳಿಸಿದರು.
ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಭದ್ರತೆಯ ದೃಷ್ಟಿಯಿಂದ ಅಂತರ್ಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇರಿದಂತೆ ಎಲ್ಲ ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿತ್ತು. ಇದೀಗ 69 ದಿನಗಳ ಬಳಿಕ ನಿರ್ಬಂಧವನ್ನು ತುಸು ಸಡಿಲಿಸಿದಂತಾಗಿದೆ.
‘ಬಾಹ್ಯ ಭಯೋತ್ಪಾದನೆಯಿಂದ ಜೀವಹಾನಿಯಾಗುವುದನ್ನು ತಡೆಯುವ ಸಲುವಾಗಿ ನಿರ್ಬಂಧ ವಿಧಿಸಲಾಗಿತ್ತು. ಅನಗತ್ಯ ಜೀವಹಾನಿಯನ್ನು ತಡೆಯುವುದಷ್ಟೇ ನಿರ್ಬಂಧ ಹೇರಿರುವುದರ ಹಿಂದಿನ ಉದ್ದೇಶವಾಗಿತ್ತು. 2008, 2010 ಹಾಗೂ 2016ರಲ್ಲಿ ಏನಾಗಿತ್ತು ಎಂಬುದನ್ನು ಗಮನದಲ್ಲಿರಿಸಿ ನೋಡಿದರೆ ಇದು ಮಹತ್ವದ ಕ್ರಮ ಎಂಬುದು ಸ್ಪಷ್ಟವಾಗುತ್ತದೆ’ ಎಂದುಕನ್ಸಲ್ ಹೇಳಿದರು.ಬಂಧನದಲ್ಲಿರುವ ರಾಜಕೀಯ ನಾಯಕರನ್ನು ಕ್ರಮೇಣ ಬಿಡುಗಡೆ ಮಾಡಲಾಗುವುದು ಎಂದೂ ಅವರು ತಿಳಿಸಿದರು.