ಮುಂಬೈ / ಅಲಹಾಬಾದ್: ಮಹಾರಾಷ್ಟ್ರದ ಮುಂಬೈನಲ್ಲಿ ಸಿಲುಕಿರುವ ಸುಮಾರು 700 ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶದ ಅವರ ಊರುಗಳಿಗೆ ತಲುಪಿಸಲು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಬುಧವಾರ ನಾಲ್ಕು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದ್ದಾರೆ.
ವಲಸೆ ಕಾರ್ಮಿಕರನ್ನು ಹೊತ್ತು ಗುರುವಾರ ಎರಡು ವಿಮಾನಗಳು ಪ್ರಯಾಣ ಬೆಳೆಸಲಿವೆ. ವಲಸೆ ಕಾರ್ಮಿಕರಿಗಾಗಿ ಅಮಿತಾಬ್ ರೈಲು ಕಾಯ್ದಿರಿಸುವ ಪ್ರಯತ್ನ ಮಾಡಿದ್ದರು, ಆದರೆ ಸಾಗಣೆಯ ಕಾರಣಗಳಿಂದ ಅದನ್ನು ಕೈಬಿಡಲಾಯಿತು ಎಂದು ಅಮಿತಾಬ್ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಅಮಿತಾಬ್ ನಿರ್ದೇಶನದ ಮೇರೆಗೆ ಎಬಿ ಕಾರ್ಪೊರೇಷನ್ ಲಿಮಿಟೆಡ್ ಪ್ರೊಡಕ್ಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಯಾದವ್, ವಿಮಾನಗಳ ವ್ಯವಸ್ಥೆ ಮಾಡಿದ್ದಾರೆ. ತಲಾ 180 ವಲಸೆ ಕಾರ್ಮಿಕರನ್ನು ಒಳಗೊಂಡಿದ್ದ ವಿಮಾನಗಳು ಬುಧವಾರ ಬೆಳಿಗ್ಗೆ ಮುಂಬೈನಿಂದ ಅಲಹಾಬಾದ್, ಗೋರಖ್ಪುರ ಹಾಗೂ ವರಾಣಸಿಗೆ ಹಾರಾಟ ನಡೆಸಿವೆ.
ಉತ್ತರ ಪ್ರದೇಶದ ಲಖನೌ, ಅಲಹಾಬಾದ್, ಬೋಧಿ ಹಾಗೂ ಇತರೆ ಪ್ರದೇಶಗಳಿಗೆ 300 ವಲಸೆ ಕಾರ್ಮಿಕರನ್ನು 10 ಬಸ್ಗಳಲ್ಲಿ ರಾಜೇಶ್ ಯಾದವ್ ಇತ್ತೀಚೆಗಷ್ಟೇ ಕಳುಹಿಸಿಕೊಟ್ಟಿದ್ದಾರೆ.
ಇಂಡಿಗೊ ವಿಶೇಷ ವಿಮಾನದಲ್ಲಿ ಅಲಹಾಬಾದ್ ವಿಮಾನ ನಿಲ್ದಾಣ ತಲುಪಿರುವ ವಲಸೆ ಕಾರ್ಮಿಕರು, ಅಮಿತಾಬ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. 'ಕಷ್ಟ ಸಮಯದಲ್ಲಿ ಉಚಿತವಾಗಿ ವಿಮಾನದಲ್ಲಿ ಕಳುಹಿಸಿಕೊಟ್ಟಿರುವುದನ್ನು ನಂಬಲೂ ಆಗುತ್ತಿಲ್ಲ. ಹಲವು ತಿಂಗಳ ನಂತರ ಊರು ಸೇರುತ್ತಿದ್ದೇವೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ಸಹ ಕಳೆದ ವಾರ ವಿಶೇಷ ವಿಮಾದ ಮೂಲಕ ಅಸ್ಸಾಂನ 180 ಮಂದಿ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿದ್ದರು. ಕಳೆದ ತಿಂಗಳು ಕೇರಳದಲ್ಲಿ ಸಿಲುಕಿದ್ದ 177 ಕಾರ್ಮಿಕರನ್ನು ಒಡಿಶಾಗೆ ಮರಳಲು ವಿಮಾನ ವ್ಯವಸ್ಥೆ ಕಲ್ಪಿಸಿದ್ದರು.
ಮಾರ್ಚ್ 25ರಿಂದ ಜಾರಿಯಾದ ಲಾಕ್ಡೌನ್ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ದೇಶದ ವಿವಿಧ ಭಾಗಗಳಲ್ಲಿ ಸಿಲುಕಿದರು. ಹಣ, ಕೆಲಸ, ಆಹಾರವಿಲ್ಲದೆ ಊರಿಗೆ ನಡೆದೇ ಹೋಗಲು ನಿರ್ಧರಿಸಿದರು. ಕೆಲವರು ಸೈಕಲ್ಗಳಲ್ಲಿ ಅಥವಾ ಸಿಕ್ಕ ವಾಹನಗಳನ್ನು ಏರಿ ನೂರು, ಸಾವಿರ ಕಿ.ಮೀ. ದೂರ ಸಾಗಿದ್ದಾರೆ.