ಮುಂಬೈ: ಉತ್ತರ ಪ್ರದೇಶದ ಸುಮಾರು 850 ರೈತರ ಸಾಲವನ್ನು ತಾವೇ ಪಾವತಿಸುವುದಾಗಿ ಖ್ಯಾತ ಹಿಂದಿ ಚಲನ ಚಿತ್ರ ನಟ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ.
‘ಮಹಾರಾಷ್ಟ್ರದ 350 ರೈತರ ಸಾಲವನ್ನು ತೀರಿಸಿ ಅವರಿಗೆ ಈ ಹಿಂದೆ ನೆರವಾಗಿದ್ದೆ. ಈ ರೈತರು ಸಾಲ ಮರುಪಾವತಿಸಲು ಸಾಧ್ಯವಾಗದಷ್ಟು ಸಂಕಷ್ಟಕ್ಕೆ ಸಿಲುಕಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳದಂತೆ ಕೆಲವು ದಿನಗಳ ಹಿಂದೆ ಈ ರೈತರ ಸಾಲವನ್ನು ಪಾವತಿಸಲಾಯಿತು.
ಈ ಮೊದಲು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರದೇಶದ ರೈತರ ಸಾಲ ತೀರಿಸಿ ನೆರವಾಗಿದ್ದೆ. ಈಗ ಉತ್ತರ ಪ್ರದೇಶದ 850 ರೈತರನ್ನು ಗುರುತಿಸಲಾಗಿದೆ. ಈ ರೈತರ ಸಾಲ ₹5.5 ಕೋಟಿಯಾಗುತ್ತದೆ. ಈ ಸಾಲವನ್ನು ನಾನೇ ತೀರಿಸುತ್ತೇನೆ’ ಎಂದು ಬ್ಲಾಗ್ನಲ್ಲಿ ಅಮಿತಾಬ್ ಬರೆದಿದ್ದಾರೆ.
‘ರೈತರಿಗೆ ನೆರವಾಗಿದ್ದು ತೃಪ್ತಿ ತಂದಿದೆ. ಇದೇ ರೀತಿ ನಮಗಾಗಿ ಎಲ್ಲ ರೀತಿಯಲ್ಲೂ ತ್ಯಾಗ ಮಾಡುವವರಿಗಾಗಿ ನೆರವು ನೀಡುವುದು ಅಗತ್ಯವಿದೆ. ದೇಶದ ಇತರ ಭಾಗಗಳಲ್ಲಿ ಸಂಕಷ್ಟದಲ್ಲಿರುವವವರಿಗೆ ನೆರವು ನೀಡಬೇಕು. ಮುಂದಿನ ದಿನಗಳಲ್ಲಿ ಈ ಕಾರ್ಯ ನಡೆಯಲಿದೆ’ ಎಂದಿದ್ದಾರೆ.