ನವದೆಹಲಿ : ಅತಂತ್ರ ಫಲಿತಾಂಶ ನೀಡಿರುವ ಕರ್ನಾಟಕ ವಿಧಾನಸಭಾ ಚುನಾವಣೆಯು, ಚುನಾವಣಾ ಪ್ರಕ್ರಿಯೆಯ ಅವಧಿಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಭಾರಿ ಸದ್ದು ಮಾಡಿತ್ತು. ಮೂರು ವಾರಗಳ ಅವಧಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಟ್ವೀಟ್ಗಳಲ್ಲಿ ‘ಕರ್ನಾಟಕ ಚುನಾವಣೆ’ಯ ಉಲ್ಲೇಖವಾಗಿತ್ತು.
ರಾಜ್ಯದ ಜನ ಮಾತ್ರವಲ್ಲದೆ, ದೇಶದ ವಿವಿಧೆಡೆಯವರು, ವಿದೇಶದಲ್ಲಿರುವವರು ಕೂಡ ಕರ್ನಾಟಕದ ಚುನಾವಣೆಯ ಬಗ್ಗೆ ಟ್ವಿಟರ್ನಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.
‘ಬಿಸಿ ಬಿಸಿ ಸುದ್ದಿಗಳು, ತೆರೆಮರೆಯ ಕಾರ್ಯಾಚರಣೆಗಳು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಸಂಬಂಧಿಸಿದ ವಿಚಾರಗಳು ಎಲ್ಲವೂ ಟ್ವಟರ್ನಲ್ಲಿ ಜೋರು ಚರ್ಚೆಯಾಗಿವೆ. ದೇಶದ ಜನರ ಜತೆ ಸಂಪರ್ಕ ಸಾಧಿಸಲು ಪಕ್ಷಗಳು ಮತ್ತು ಅಭ್ಯರ್ಥಿಗಳು ಟ್ವಿಟರ್ ಅನ್ನು ಬಳಸಿಕೊಂಡಿದ್ದಾರೆ. ರಾಜಕೀಯ ಚರ್ಚೆಗೆ ಟ್ವಿಟರ್ ಅತ್ಯುತ್ತಮ ತಾಣವಾಗಿ ಚುನಾವಣೆ ಸಂದರ್ಭದಲ್ಲಿ ಹೊರಹೊಮ್ಮಿತು’ ಎಂದು ಟ್ವಿಟರ್ ಹೇಳಿಕೊಂಡಿದೆ.
ಚುನಾವಣಾ ಸಂದರ್ಭದಲ್ಲಿ ಅತಿ ಹೆಚ್ಚು ಉಲ್ಲೇಖವಾದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ಕಣದಲ್ಲಿದ್ದ ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಚರ್ಚೆಗೆ ಒಳಗಾದವರು ಸಿದ್ದರಾಮಯ್ಯ.
‘ಎಲ್ಲ ರೀತಿಯ ರಾಜಕೀಯ ಸಂವಾದ ಸಾಧ್ಯವಾಗುವ ತಾಣ ಟ್ವಿಟರ್. ಚುನಾವಣೆಗೆ ಸಂಬಂಧಿಸಿದ ಚರ್ಚೆಯ ಎಲ್ಲ ಆಯಾಮಗಳನ್ನೂ ಇಲ್ಲಿ ಕಾಣಬಹುದು. ಅಭ್ಯರ್ಥಿಗಳು ಮತ್ತು ಪಕ್ಷಗಳು ಟ್ವಿಟರ್ ಮೂಲಕ ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಜಿಟಲ್ ಪ್ರಚಾರ ಅಭಿಯಾನದ ನೇರ ನೋಟ ಮತದಾರರಿಗೆ ಟ್ವಿಟರ್ನಲ್ಲಿ ಸಿಕ್ಕಿದೆ’ ಎಂದು ಟ್ವಿಟರ್ನ ಭಾರತ ವಿಭಾಗದ ಸಾರ್ವಜನಿಕ ನೀತಿ ಮತ್ತು ಸರ್ಕಾರ ವಿಭಾಗದ ಮುಖ್ಯಸ್ಥೆ ಮಹಿಮಾ ಕೌಲ್ ಹೇಳಿದ್ದಾರೆ.
*
ಟ್ವಿಟರ್ ಚರ್ಚೆಯಲ್ಲಿ ಪಾಲು
51%
ಬಿಜೆಪಿ (@BJP4Karnataka)
42%
ಕಾಂಗ್ರೆಸ್ ಪಕ್ಷ (@INCKarnataka)
7%
ಜೆಡಿಎಸ್
10,151
ಗರಿಷ್ಠ ಸಂಖ್ಯೆಯ ಮರುಟ್ವೀಟ್. ಪ್ರಧಾನಿ ಬಗ್ಗೆ ರಾಹುಲ್ ಗಾಂಧಿಯ ಟ್ವೀಟ್ ಅತಿ ಹೆಚ್ಚು ಮರುಟ್ವೀಟ್ ಆಗಿತ್ತು
22,930
ಈ ಟ್ವೀಟನ್ನು ಇಷ್ಟಪಟ್ಟ (ಲೈಕ್) ಜನರ ಸಂಖ್ಯೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.