ನವದೆಹಲಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆಂಧ್ರಭವನದ ಹೊರಗೆ ಅಂಗವಿಕಲ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಆಂಧ್ರದ ಶ್ರೀಕಾಕುಲಂ ಜಿಲ್ಲೆಯ ಕಿಂತಾಳಿ ಗ್ರಾಮದ ದೇವಳ ಅರ್ಜುನ್ ರಾವ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ನಾಯ್ಡು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವುದಕ್ಕಾಗಿ ರಾವ್ ದೆಹಲಿಗೆ ಬಂದಿದ್ದರು.
ಆರ್ಥಿಕ ಸಮಸ್ಯೆಯಿಂದಾಗಿ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಭಾನುವಾರ ತಡ ರಾತ್ರಿ ಈ ವ್ಯಕ್ತಿ ಆತ್ಮಹತ್ಯೆ ಮಾಡಿದ್ದಾರೆ, ಸೋಮವಾರ ಬೆಳಗ್ಗೆ ಇಆರ್ವಿ ಮೂಲಕ ಮಾಹಿತಿ ಸಿಕ್ಕಿದ್ದು ಮೃತದೇಹ ಜಸ್ವಂತ್ ಸಿಂಗ್ ರಸ್ತೆಯಲ್ಲಿ ಬಿದ್ದಿತ್ತು.
ವೀಲ್ ಚೇರ್ನಲ್ಲಿ ಕುಳಿತಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ತೆಲುಗು ಭಾಷೆಯಲ್ಲಿ ಬರೆದ ಆತ್ಮಹತ್ಯಾ ಟಿಪ್ಪಣಿ ಸಿಕ್ಕಿದೆ ಎಂದು ದೆಹಲಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಮಧುರ್ ವರ್ಮಾ ಹೇಳಿದ್ದಾರೆ.
ಆತ್ಮಹತ್ಯೆಗೆ ಹಣಕಾಸಿನ ಸಮಸ್ಯೆಯೇ ಕಾರಣ ಎಂದು ಎರಡು ಪುಟಗಳಷ್ಟು ದೀರ್ಘದ ಆತ್ಮಹತ್ಯಾ ಟಿಪ್ಪಣಿಯಲ್ಲಿ ಬರೆದಿದೆ .ಹೆಚ್ಚಿನ ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬದ ಸದಸ್ಯರಿಗೆ ಬಿಟ್ಟುಕೊಡಲಾಗುವುದು ಎಂದು ಡಿಸಿಪಿ ವರ್ಮಾ ಹೇಳಿದ್ದಾರೆ.