ಹೈದರಾಬಾದ್:ಬಡ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಮುಂದಾಗಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು 10 ವಿವಿಧ ಯೋಜನೆಗಳ ಪಿಂಚಣಿಯನ್ನು ದುಪ್ಪಟ್ಟು ಮಾಡಿದ್ದಾರೆ.
ನೆಲ್ಲೋರ್ ಜಿಲ್ಲೆಯ ಬೋಗೂರುನಲ್ಲಿ ನಡೆದ ಸಮಾರಂಭದಲ್ಲಿ, ಹಿರಿಯ ನಾಗರಿಕರಿಗೆ ಹಾಗೂ ವಿಧವೆಯರಿಗೆ ಈವರೆಗೆ ನೀಡುತ್ತಿದ್ದ ₹1,000 ಪಿಂಚಣಿಯನ್ನು ₹2,000ಕ್ಕೆ ಹೆಚ್ಚಿಸಲಾಗಿದೆ ಎಂದು ಅವರು ಪ್ರಕಟಿಸಿದರು. 54.14 ಲಕ್ಷ ಫಲಾನುಭವಿಗಳಿಗೆ ಇದರ ಲಾಭವಾಗಲಿದೆ.
ಮುಂದಿನ ವಾರ ಬರುವ ಸಂಕ್ರಾಂತಿ ಸುಗ್ಗಿಯ ಸಂದರ್ಭದಲ್ಲಿ ನಾಯ್ಡು ಅವರು ಮಹಿಳೆಯರು ಸೇರಿದಂತೆ ರೈತರಿಗೆ ವಿಶೇಷ ಕೊಡುಗೆಗಳನ್ನು ನೀಡಲಿದ್ದಾರೆ ಎಂದು ತೆಲುಗು ದೇಶಂ ಪಕ್ಷದ (ಟಿಡಿಪಿ) ಮೂಲಗಳು ತಿಳಿಸಿವೆ.