ಅಹಮದಾಬದ್:ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಟೀಕಿಸಿ ಬರೆಯಲಾಗಿರುವ ಪುಸ್ತಕವೊಂದು ಕಳೆದ 27 ವರ್ಷಗಳಿಂದ ಗುಜರಾತ್ನಲ್ಲಿ ಮಾರಾಟವಾಗುತ್ತಿದೆ! ಗುಜರಾತ್ನ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿಯೇ ಪುಸ್ತಕ ಮಾರಾಟವಾಗುತ್ತಿರುವುದು ತಿಳಿದುಬಂದಿದೆ.
ಆರ್ಎಸ್ಎಸ್ ಮುಖಂಡಎಚ್.ವಿ. ಶೇಷಾದ್ರಿ ಬರೆದಿರುವ ‘ವಿಭಜನೆಯ ದುರಂತ ಕಥೆ (The Tragic Story of Partition)’ ಪುಸ್ತಕದಲ್ಲಿ ಪಟೇಲ್ ಹಾಗೂ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರು, ಇಬ್ಬರನ್ನೂ ಟೀಕಿಸಲಾಗಿದೆ. ದೇಶ ವಿಭಜನೆಗೆ ಅವರಿಬ್ಬರೂ ಕಾರಣರು ಎಂದು ಬರೆಯಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ದೇಶ ವಿಭಜನೆಗೆ ಸಂಬಂಧಿಸಿ ಜಸ್ವಂತ್ ಸಿಂಗ್ ಅವರು ಬರೆದಿರುವ ‘ಜಿನ್ನಾ’ ಪುಸ್ತಕವನ್ನು ಪ್ರಧಾನಿ ನರೇಂದ್ರ ಮೋದಿ 2009ರಲ್ಲಿ (ಆಗ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು) ನಿಷೇಧಿಸಿದ್ದರು. ಸರ್ದಾರ್ ಪಟೇಲ್ ಅವರನ್ನು ಅವಮಾನಿಸಲಾಗಿದೆ ಎಂದು ಮೋದಿ ಈ ನಿರ್ಧಾರ ಕೈಗೊಂಡಿದ್ದರು. ಆದರೆ, ಅಂತಹದ್ದೇ ಇನ್ನೊಂದು ಪುಸ್ತಕ ದಶಕಗಳಿಂದ ಮಾರಾಟವಾಗುತ್ತಿದ್ದರೂ ಮೋದಿಗೆ ತಿಳಿದಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಸರ್ದಾರ್ ಪಟೇಲ್ ಪ್ರತಿಮೆಗಳಿಗೂ ಸರದಾರ
‘ಮೋದಿ ಅವರಿಗೆ ಈ ಪುಸ್ತಕದ ಬಗ್ಗೆ ಅರಿವಿಲ್ಲದಿರುವ ಸಾಧ್ಯತೆಯೂ ಇದೆ. 1967ರಿಂದ 1980ರ ವರೆಗೆ ಮೋದಿ ಅವರು ಆರ್ಎಸ್ಎಸ್ ಪ್ರಚಾರಕರಾಗಿ ಆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಎಚ್.ವಿ. ಶೇಷಾದ್ರಿ ಅವರ ಪುಸ್ತಕ 1982ರ ನಂತರ ಪ್ರಕಟವಾಗಿತ್ತು’ ಎಂದೂವರದಿಯಲ್ಲಿ ಹೇಳಲಾಗಿದೆ.
‘ಜಿನ್ನಾ, ಭಾರತ, ಸ್ವಾತಂತ್ರ್ಯ, ವಿಭಜನೆ’ ಪುಸ್ತಕದಲ್ಲಿ ಜಸ್ವಂತ್ ಸಿಂಗ್ ಮಾಡಿರುವಂತೆಯೇಎಚ್.ವಿ. ಶೇಷಾದ್ರಿ ಪುಸ್ತಕದಲ್ಲೂ ದೇಶ ವಿಭಜನೆಗೆ ಸರ್ದಾರ್ ಪಟೇಲ್, ನೆಹರು ಅವರನ್ನು ಹೊಣೆ ಮಾಡಲಾಗಿದೆ. ಈಗಲೂ ಗುಜರಾತ್ನ ಸಾಹಿತ್ಯ ಸಾಧನಾ ಟ್ರಸ್ಟ್ನಲ್ಲಿಶೇಷಾದ್ರಿ ಪುಸ್ತಕ ಮಾರಾಟವಾಗುತ್ತಿದೆ.
ಇದನ್ನೂ ಓದಿ:ಏಕತಾ ಮೂರ್ತಿ ಮುಂದಿನ ಪೀಳಿಗೆಗೆ ಸ್ಫೂರ್ತಿ
ಈ ಮಧ್ಯೆ, ಕಾನೂನು ಸವಾಲುಗಳನ್ನು ಎದುರಿಸುವ ಸಲುವಾಗಿ ಶೇಷಾದ್ರಿ ಅವರ ಪುಸ್ತಕದ ಬಗ್ಗೆ ಸೂಕ್ಷ್ಮವಾಗಿ ಪರೀಕ್ಷಿಸುವಂತೆ ನಿಕಟವರ್ತಿಗಳಿಗೆ ಮೋದಿ ಸೂಚಿಸಿದ್ದಾರೆ ಎಂಬುದು ತಿಳಿದುಬಂದಿದೆ. ‘ಜಿನ್ನಾ’ ಪುಸ್ತಕ ನಿಷೇಧ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ಜಸ್ವಂತ್ ಸಿಂಗ್ ಮುಂದಾಗಿರುವುದು ಖಚಿತಪಡಿಸಲಾರದ ಮೂಲಗಳಿಂದ ತಿಳಿದುಬಂದಿದೆ. ಜಸ್ವಂತ್ ಸಿಂಗ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದೇ ಆದಲ್ಲಿ ಅವರ ವಾದಕ್ಕೆ ಶೇಷಾದ್ರಿ ಅವರ ಪುಸ್ತಕ ಬಲತುಂಬಲಿದೆ. ಬಿಜೆಪಿ ನಾಯಕ ಅರುಣ್ ಶೌರಿ ಅವರೇ ಸಿಂಗ್ ಪುಸ್ತಕ ನಿಷೇಧವನ್ನು ಹಾಸ್ಯಾಸ್ಪದ ಎಂದಿದ್ದರು ಎಂದೂ ವರದಿಯಲ್ಲಿ ಹೇಳಲಾಗಿದೆ.
ಕಳೆದ 27 ವರ್ಷಗಳಿಂದ ಶೇಷಾದ್ರಿ ಅವರ ಪುಸ್ತಕದ ಸಾವಿರಾರು ಪ್ರತಿಗಳು ಗುಜರಾತ್ನಲ್ಲಿ ಮಾರಾಟವಾಗುತ್ತಿವೆ. ಪ್ರತಿಯೊಬ್ಬ ಆರ್ಎಸ್ಎಸ್ ಸದಸ್ಯನೂ ಈ ಪುಸ್ತಕವನ್ನು ಹೊಂದಿರಲೇಬೇಕು ಎಂಬಂಥ ಸ್ಥಿತಿ ಇದೆ ಎಂದೂ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ಸರ್ದಾರ್ಗೆ ಗೌರವ: ‘ಪಟೇಲಸದೃಶ’ ಬದ್ಧತೆ
‘ಶೇಷಾದ್ರಿ ಅವರ ಪುಸ್ತಕದಲ್ಲಿ ಸಂಘದ ಪ್ರಮುಖ ಸಿದ್ಧಾಂತವಾಗಿರುವ ಅಖಂಡ ಭಾರತದ ಮಹತ್ವದ ಬಗ್ಗೆ ಉಲ್ಲೇಖಸಲಾಗಿದೆ’ ಎಂದು ಗುಜರಾತ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಹೇಮಂತ್ ಶಾ ತಿಳಿಸಿದ್ದಾರೆ.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.