ಇಟಾನಗರ: ಕೊರೊನಾ ವೈರಸ್ (ಕೋವಿಡ್–19) ಸೋಂಕು ಹರಡುವುದನ್ನು ತಡೆಗಟ್ಟಲೆಂದು ಅರುಣಾಚಲ ಪ್ರದೇಶ ಸರ್ಕಾರವು ವಿದೇಶಿಗರಿಗೆ ಸಂರಕ್ಷಿತ ಪ್ರದೇಶಗಳ ಪ್ರವೇಶ ಅನುಮತಿ ಪತ್ರ (ಪ್ರೊಟೆಕ್ಟೆಡ್ ಏರಿಯಾ ಪರ್ಮಿಟ್–ಪಿಎಪಿ) ನೀಡುವುದನ್ನು ಭಾನುವಾರದಿಂದ ಸ್ಥಗಿತಗೊಳಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಅರುಣಾಚಲ ಪ್ರದೇಶಕ್ಕೆ ವಿದೇಶಿಗರು ಪ್ರವೇಶಿಸಲು ಪಿಎಪಿ ಪಡೆದುಕೊಳ್ಳಬೇಕು ಎಂಬ ನಿಯಮವಿದೆ.
ಮುಂದಿನ ಆದೇಶದವರೆಗೆ ಪಿಎಪಿವಿತರಣೆ ಸ್ಥಗಿತಗೊಳಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್,ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
‘ವಿದೇಶಗಳಿಂದ ಭಾರತಕ್ಕೆ ಬಂದಿರುವವರಲ್ಲಿಯೇ ಕೊರೊನಾ ವೈರಸ್ ಸೋಂಕು ಪತ್ತೆಯಾಗುತ್ತಿದೆ. ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಸೋಂಕು ಹರಡುವುದನ್ನು ತಡೆಯಲೆಂದು ವಿದೇಶಿಗರಿಗೆ ಪ್ರವೇಶ ಅನುಮತಿ ನಿರಾಕರಿಸಲು ನಿರ್ಧರಿಸಲಾಗಿದೆ’ ಎಂದು ಸರ್ಕಾರದಆದೇಶ ಹೇಳಿದೆ.
ಸಿಕ್ಕಿಂ ರಾಜ್ಯವು ಕೆಲವೇ ದಿನಗಳ ಹಿಂದೆ ವಿದೇಶಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಭೂತಾನ್ ದೇಶವೂ ವಿದೇಶಿಗರ ಪ್ರವೇಶವನ್ನುಎರಡು ವಾರಗಳ ಅವಧಿಗೆ ನಿರ್ಬಂಧಿಸಿತ್ತು.
ಕಳೆದ ಡಿಸೆಂಬರ್ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾವೈರಸ್ 97 ದೇಶಗಳಿಗೆ ಹಬ್ಬಿದ್ದು, 102,180 ಜನರನ್ನು ಬಾಧಿಸಿದೆ. 3,500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.