ನವದೆಹಲಿ:ರಾಷ್ಟ್ರ ರಾಜಧಾನಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ತಿಳಿಸಿದ್ದಾರೆ.
‘ನಾವು ರಾಜ್ಯದ ಸ್ಥಾನಮಾನ ಪಡೆಯುವವರೆಗೂ ಉಪವಾಸ ಸತ್ಯಾಗ್ರಹ ನಡೆಸಲಿದ್ದೇನೆ. ಈ ವಿಚಾರದಲ್ಲಿ ಸಾವನ್ನು ಎದುರಿಸಲೂ ಸಿದ್ಧ’ ಎಂದು ರಾಜ್ಯ ವಿಧಾನಸಭೆಯಲ್ಲಿ ಅವರು ತಿಳಿಸಿದ್ದಾರೆ.
‘ಸದ್ಯದ ಬಿಕ್ಕಟ್ಟನ್ನು ನಿವಾರಿಸಲು ಚಳವಳಿಯೊಂದೇ ದಾರಿ. ರಾಜ್ಯ ಸ್ಥಾನಮಾನಕ್ಕಾಗಿ ದೆಹಲಿಯ ಜನರು ಬೀದಿಗಿಳಿಯಬೇಕು’ ಎಂದು ಅವರು ಕರೆ ನೀಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದರೆ ಎರಡು ವರ್ಷಗಳ ಒಳಗಾಗಿ ರಾಜ್ಯ ಸ್ಥಾನಮಾನ ಪಡೆಯುವಂತೆ ಮಾಡಲಾಗುವುದು ಎಂದು ಪಕ್ಷದ ಮುಖ್ಯಸ್ಥರೂ ಆಗಿರು ಕೇಜ್ರಿವಾಲ್ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಶುಕ್ರವಾರ ಹೇಳಿದ್ದರು.
ಮೋದಿ ವಿರುದ್ಧ ಆಕ್ರೋಶ: ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಷ್ಟ್ರೀಯ ವಿಷಯಗಳನ್ನು ನಿಭಾಯಿಸಲಾಗುತ್ತಿಲ್ಲ. ಅವರ್ಯಾಕೆ ದೆಹಲಿ ಪುರಸಭೆ ಮತ್ತು ಪೊಲೀಸರ ಬಗ್ಗೆ ಚಿಂತಿಸಬೇಕು? ಅವರು ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಚಿಂತಿಸಲಿ. ದೆಹಲಿಯನ್ನು ನಿಭಾಯಿಸಲು ನಮಗೆ ಬಿಡಲಿ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.