ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿ, ಲಾಕ್ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿರುವುದಾಗಿ ಹೇಳಿದ ಬೆನ್ನಿಗೇ ಗೃಹ ಸಚಿವ ಅಮಿತ್ ಶಾ ಸರಣಿ ಟ್ವೀಟ್ಗಳ ಮೂಲಕ ದೇಶದ ಜನರಲ್ಲಿ ವಿಶ್ವಾಸ ತುಂಬಲು ಯತ್ನಿಸಿದ್ದಾರೆ.
'ದೇಶದ ಗೃಹ ಸಚಿವನಾಗಿ ನಾನು ಎಲ್ಲರಿಗೂ ಭರವಸೆ ಕೊಡಲು ಇಚ್ಛಿಸುತ್ತೇನೆ. ದೇಶದಲ್ಲಿ ಆಹಾರ, ಔಷಧಿ ಮತ್ತು ಇತರ ಅತ್ಯಗತ್ಯ ವಸ್ತುಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿವೆ. ಯಾವೊಬ್ಬ ಪ್ರಜೆಯೂ ಆತಂಕಪಡುವ ಅಗತ್ಯವಿಲ್ಲ' ಎಂದು ಅಮಿತ್ ಶಾ ಹೇಳಿದ್ದಾರೆ.
ಶಕ್ತ ಜನರು ಮುಂದೆ ಬಂದು ಅಶಕ್ತರಿಗೆ ನೆರವಾಗಬೇಕು. ತಮ್ಮ ಸನಿಹದಲ್ಲಿ ವಾಸಿಸುತ್ತಿರುವ ಬಡವರಿಗೆ ಆಸರೆಯಾಗಬೇಕು ಎಂದು ಅಮಿತ್ ಶಾ ವಿನಂತಿಸಿದ್ದಾರೆ.
'ಲಾಕ್ಡೌನ್ ಜಾರಿಗೊಳಿಸುವ ವಿಚಾರದಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳ ನಡುವೆ ಸಹಕಾರ ಮತ್ತು ಸಹಯೋಗ ಇರಬೇಕು.'ದೇಶದ ಯಾವುದೇ ಜನರಿಗೆ ಅವರ ಅಗತ್ಯದ ವಸ್ತುಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಬಾರದು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಇನ್ನಷ್ಟು ಸಹಯೋಗದಿಂದಕೆಲಸಗಳು ನಡೆಯಬೇಕಿವೆ' ಎಂದು ಹೇಳಿದ್ದಾರೆ.
'ವೈದ್ಯರು, ನರ್ಸ್ಗಳು, ವೈದ್ಯಕೀಯ ಸಿಬ್ಬಂದಿ, ಪೌರ ಕಾರ್ಮಿಕರು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಕೊರೊನಾ ಸೋಂಕು ನಿವಾರಣೆಯಲ್ಲಿ ಅತಿಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರ ಪರಿಶ್ರಮವನ್ನು ನಾವೆಲ್ಲರೂ ಗೌರವಿಸಬೇಕು' ಎಂದು ಹೇಳಿದ್ದಾರೆ.
'ನಿಮ್ಮ ಧೈರ್ಯ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವು ಸ್ಪಂದಿಸುತ್ತಿರುವ ರೀತಿ ಎಲ್ಲ ಭಾರತೀಯರಿಗೆ ಪ್ರೇರಣಾದಾಯಿ. ನಿಯಮಗಳನ್ನು ಎಲ್ಲರೂ ಅನುಸರಿಸಬೇಕು. ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕು' ಎಂದು ಹೇಳಿದ್ದಾರೆ.
देश के गृह मंत्री के नाते मैं जनता को पुनः आश्वस्त करता हूँ कि देश में अन्न, दवाई व अन्य रोजमर्रा की चीज़ों का प्रयाप्त भण्डार है, इसलिए किसी भी नागरिक को परेशान होने की आवश्यकता नहीं है। साथ ही संपन्न लोगों से निवेदन करता हूँ कि आप आगे आकर आसपास रहने वाले गरीबों की सहायता करें।