ಅಡಿಲೇಡ್: ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುತ್ತಿರುವ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪ್ರವಾಸಿ ತಂಡದ ವಿರುದ್ಧ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಸಿಡ್ನಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ನಿರಾಸೆ ಕಂಡಿತ್ತು. ಸರಣಿ ಜಯದ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಗೆಲ್ಲಲೇಬೇಕು.
ಸಂಕ್ರಾಂತಿ ಹಬ್ಬದಂದು ನಡೆಯುತ್ತಿರುವ ಈ ಹಣಾಹಣಿಯಲ್ಲಿ ಭಾರತ ಎಳ್ಳು, ಬೆಲ್ಲದ ಸಿಹಿ ಸವಿಯುತ್ತದೆಯೋ ಅಥವಾ ಕಹಿ ಅನುಭವಿಸಲಿದೆಯೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ.
ಮೊದಲ ಹಣಾಹಣಿಯಲ್ಲಿ ಪ್ರವಾಸಿ ಪಡೆ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿತ್ತು. ಶಿಖರ್ ಧವನ್, ಕೊಹ್ಲಿ ಮತ್ತು ಅಂಬಟಿ ರಾಯುಡು ಬೇಗನೇ ವಿಕೆಟ್ ಕಳೆದುಕೊಂಡಿದ್ದರು. ಆದರೆಧೋನಿ ಮತ್ತು ರೋಹಿತ್ ಅಮೋಘ ಜೊತೆಯಾಟ ಆಡಿ ಅಭಿಮಾನಿಗಳನ್ನು ರಂಜಿಸಿದ್ದರು. ಹೀಗಿದ್ದರೂ ತಂಡ ಸೋಲಿನಿಂದ ಪಾರಾಗಿರಲಿಲ್ಲ.
ಇವರ ಜೊತೆ ಧವನ್, ಕೊಹ್ಲಿ ಮತ್ತು ರಾಯುಡು ಅಬ್ಬರಿಸಬೇಕು. ಹಾಗಾದಲ್ಲಿ ಮಾತ್ರ ಅಡಿಲೇಡ್ ಓವಲ್ ಮೈದಾನದಲ್ಲಿ ರನ್ ಮಳೆ ಸುರಿಯಲಿದೆ. ದಿನೇಶ್ ಕಾರ್ತಿಕ್, ಕೇದಾರ್ ಜಾಧವ್ ಮತ್ತು ರವೀಂದ್ರ ಜಡೇಜ ಅವರೂ ನಿರೀಕ್ಷೆಗೆ ಅನುಗುಣವಾಗಿ ಆಡಬೇಕಿದೆ.
ಮೊದಲ ಪಂದ್ಯದಲ್ಲಿ ಗೆದ್ದು ಬೀಗಿರುವ ಆ್ಯರನ್ ಫಿಂಚ್ ಬಳಗ ಎರಡನೇ ಹಣಾಹಣಿಯಲ್ಲೂ ಪ್ರವಾಸಿ ಪಡೆಗೆ ಸೋಲಿನ ರುಚಿ ತೋರಿಸಲು ತಯಾರಾಗಿದೆ.
ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್ ಮತ್ತು ಪೀಟರ್ ಹ್ಯಾಂಡ್ಸ್ಕಂಬ್ ಉತ್ತಮ ಲಯದಲ್ಲಿರುವುದು ಈ ತಂಡಕ್ಕೆ ವರವಾಗಿ ಪರಿಣಮಿಸಿದೆ. ಇವರು ಮೊದಲ ಹಣಾಹಣಿಯಲ್ಲಿ ಅರ್ಧಶತಕಗಳನ್ನು ಗಳಿಸಿ ಗಮನ ಸೆಳೆದಿದ್ದರು.