ನವದೆಹಲಿ : ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ರಾಮಮಂದಿರವನ್ನು ಧ್ವಂಸಗೊಳಿಸಲಾಗಿತ್ತು ಎಂದು ರಾಮ ಲಲ್ಲಾ ವಿರಾಜಮಾನ್ ಪರ ವಕೀಲರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ವರದಿ ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಎದುರು ಮಂಗಳವಾರ ವಾದ ಮಂಡಿಸಿದರು.
ರಾಜಕೀಯವಾಗಿ ಅತಿಸೂಕ್ಷ್ಮವಾಗಿರುವ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದ ಪ್ರಕರಣದ ಕಕ್ಷಿದಾರರಲ್ಲೊಬ್ಬರಾದ ರಾಮ ಲಲ್ಲಾ ವಿರಾಜಮಾನ್ ಪರ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ ಕೋರ್ಟ್ಗೆ ಹಾಜರಾಗಿ, ಮಂದಿರದ ಕಟ್ಟಡದಲ್ಲಿ ಮೊಸಳೆ ಮತ್ತು ಆಮೆ ಚಿತ್ರಗಳಿವೆ ಎಂದು ಎಎಸ್ಐ ವರದಿಯಲ್ಲಿ ಹೇಳಲಾಗಿದೆ. ಈ ಚಿತ್ರಗಳು ಮುಸ್ಲಿಂ ಸಂಸ್ಕೃತಿಗೆ ವಿರುದ್ಧವಾದ ವುಗಳು ಎಂದು ಹೇಳಿದರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ, ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್.ಎ.ನಜೀರ್ ಅವರಿದ್ದ ಪೀಠದ ಎದುರು ಎಂಟನೇ ದಿನದ ವಿಚಾರಣೆಯಲ್ಲಿ ವಕೀಲರು ತಮ್ಮ ವಾದ ಮಂಡಿಸಿದರು.