ಅಯೋಧ್ಯೆ:ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಅಯೋಧ್ಯೆಯಲ್ಲಿ ನ.25ರಂದು ಆಯೋಜಿಸಿರುವ ಧರ್ಮಸಭೆಗೆ ಭಕ್ತಸಮೂಹವನ್ನು ಆಕರ್ಷಿಸಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಗುರುವಿಗೆ ಮೊರೆ ಹೋಗಿದೆ. ಅಂದರೆ, ಸಮಾವೇಶದ ಭಿತ್ತಿಪತ್ರಗಳಲ್ಲಿ ಅವರ ಭಾವಚಿತ್ರವನ್ನು ಮುದ್ರಿಸಿ ವಿತರಿಸುತ್ತಿದೆ.
ಆದಿತ್ಯನಾಥ ಅವರ ಗುರು ಮಹಾಂತ ಅವೈದ್ಯನಾಥ ಅವರು ಗೋರಖ್ಪುರ ಮೂಲದ ಗೋರಕ್ಷನಾಥ ಪೀಠದ ಮುಖ್ಯಸ್ಥರಾಗಿದ್ದಲ್ಲದೆ, ನಾಲ್ಕು ಬಾರಿ ಬಿಜೆಪಿಯ ಸಂಸದರೂ ಆಗಿದ್ದರು. 2014ರಲ್ಲಿ ಅವರು ವಿಧಿವಶರಾದರು.
ಗೋರಕ್ಷನಾಥ ಪೀಠದ ಪ್ರಭಾವ ಇರುವ ಗೊಂಡಾ, ಅಂಬೇಡ್ಕರ್ನಗರ, ಬಸ್ತಿ, ಸಂತ ಕಬೀರ್ ನಗರ, ಬಹರೇಚ್ ಮತ್ತು ಗೋರಖ್ಪುರ ಜಿಲ್ಲೆಗಳಲ್ಲಿ ಅವರಿಗೆ ಅಪಾರ ಭಕ್ತರಿದ್ದಾರೆ. ಈ ಭಕ್ತಸಮೂಹವನ್ನು ಧರ್ಮಸಭೆಗೆ ಸೆಳೆಯುವ ಉದ್ದೇಶದಿಂದ ಅವರ ಭಾವಚಿತ್ರವನ್ನು ಪೋಸ್ಟರ್ನಲ್ಲಿ ಹಾಕಿ ಪ್ರಚಾರ ಮಾಡಲಾಗುತ್ತಿದೆ.