ಲಖನೌ : ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಡಿಸೆಂಬರ್ 9ಕ್ಕೆ ಮುನ್ನ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ತಿಳಿಸಿದೆ.
‘ಮಂಡಳಿ ಈ ವಿಷಯದಲ್ಲಿ ದೃಢವಾದ ನಿರ್ಧಾರ ಕೈಗೊಂಡಿದೆ. ಅರ್ಜಿಸಲ್ಲಿಸಲು ಡಿಸೆಂಬರ್ 9ರವರೆಗೆ ಕಾಲಾವಕಾಶವಿದೆ’ ಎಂದು ಎಐಎಂಪಿಎಲ್ಬಿ ಕಾರ್ಯದರ್ಶಿ ಝಫರ್ಯಾಬ್ ಜಿಲಾನಿ ತಿಳಿಸಿದ್ದಾರೆ.
ಕೇಂದ್ರೀಯ ಸುನ್ನಿ ವಕ್ಫ್ ಮಂಡಳಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದಿರಲು ಮಂಗಳವಾರ ನಿರ್ಧರಿಸಿತ್ತು. ಆದರೆ,ಮಸೀದಿಗೆ ಐದು ಎಕರೆ ಜಮೀನು ಸ್ವೀಕರಿಸುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ.
‘ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರೆ ಆರೋಪಪಟ್ಟಿ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಪೊಲೀಸರು ಮುಸ್ಲಿಂ ಅರ್ಜಿದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ವಿಷಯವನ್ನು ಸಹ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸುವ ಅರ್ಜಿಯಲ್ಲಿ ಉಲ್ಲೇಖಿಸಲಾಗುವುದು’ ಎಂದು ತಿಳಿಸಿದ್ದಾರೆ.
ನಮಗೆ ಭೂಮಿ ನೀಡಿ: ಶಿಯಾ ವಕ್ಫ್
ಅಯೋಧ್ಯೆಯಲ್ಲಿ ಐದು ಎಕರೆ ಭೂಮಿ ಪಡೆಯಲು ಸುನ್ನಿ ವಕ್ಫ್ ಮಂಡಳಿಯು ನಿರಾಕರಿಸಿದರೆ ಆ ಭೂಮಿಯನ್ನು ನಮಗೆ ನೀಡಿ’ ಎಂದು ಶಿಯಾ ವಕ್ಫ್ ಮಂಡಳಿ ಮನವಿ ಮಾಡಿದೆ.
‘ಐದು ಎಕರೆ ಪ್ರದೇಶದಲ್ಲಿ ನಾವು ಮಸೀದಿ ನಿರ್ಮಾಣ ಮಾಡುವುದಿಲ್ಲ. ಆದರೆ, ಆಸ್ಪತ್ರೆ ಕಟ್ಟಿಸುವ ಉದ್ದೇಶ ಹೊಂದಿದ್ದೇವೆ. ಭೂಮಿ ಕೇಳಲು ನಾವು ಸುಪ್ರೀಂ ಕೋರ್ಟ್ಗೆ ಹೋಗುವುದಿಲ್ಲ. ಬದಲಿಗೆ ಕೇಂದ್ರ ಸರ್ಕಾರವನ್ನೇ ಕೇಳುತ್ತೇವೆ’ ಎಂದು ಮಂಡಳಿಯ ಮುಖ್ಯಸ್ಥ ವಸೀಮ್ ರಿಜ್ವಿ ಹೇಳಿದರು.