ಲಖನೌ: ಮಸೀದಿಗಾಗಿ ಉತ್ತರ ಪ್ರದೇಶ ಸರ್ಕಾರ ಮಂಜೂರು ಮಾಡಿರುವ ಭೂಮಿಯನ್ನು ನಿರಾಕರಿಸಿ, ಈ ಕುರಿತು ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಮುಸ್ಲಿಂ ಕಕ್ಷಿದಾರರು ಹೇಳಿದ್ದಾರೆ.
ಅಯೋಧ್ಯೆಯಿಂದ 25 ಕಿ.ಮೀ ದೂರದಲ್ಲಿ ಈ ಭೂಮಿ ಇದೆ. ನಮಾಜ್ (ಪ್ರಾರ್ಥನೆ) ಮಾಡಲು ಅಷ್ಟು ದೂರ ಹೋಗಲು ಕಷ್ಟವಾಗುತ್ತದೆ. ಅಯೋಧ್ಯೆಯಲ್ಲಿ ಅಥವಾ ಸಮೀಪದಲ್ಲಿಯೇ ಭೂಮಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಸರ್ಕಾರ ನಮಗೆ ನ್ಯಾಯ ಒದಗಿಸಿಲ್ಲ’ ಎಂದು ಪ್ರಮುಖ ಕಕ್ಷಿದಾರರಾದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಯ ಸಭೆ ಫೆಬ್ರುವರಿ 24 ರಂದು ನಡೆಯಲಿದ್ದು, ಸರ್ಕಾರ ನೀಡಿರುವ ಈ ಭೂಮಿಯನ್ನು ಪಡೆಯಬೇಕೊ ಬೇಡವೇ ಎಂಬುದನ್ನು ಅಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಮಂಡಳಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.