ನವದೆಹಲಿ: ಉತ್ತರಪ್ರದೇಶ ಬಾರ್ ಕೌನ್ಸಿಲ್ ಅಧ್ಯಕ್ಷೆ ದರ್ವೇಶ್ ಸಿಂಗ್ ಯಾದವ್ ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಶುಕ್ರವಾರ ಸಮ್ಮತಿಸಿದೆ.
ವಕೀಲೆ ಇಂದು ಕೌಲ್ ಈ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಗಂಭೀರವಾಗಿರುವ ಕಾರಣ ವಿಚಾರಣೆಯನ್ನು ಬರುವ ಮಂಗಳವಾರ (ಜೂನ್ 25) ನಡೆಸುವುದಾಗಿ ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಸೂರ್ಯಕಾಂತ ಅವರಿರುವ ರಜಾಕಾಲದ ನ್ಯಾಯಪೀಠ ಹೇಳಿತು.
ಬಾರ್ ಕೌನ್ಸಿಲ್ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಯಾದವ್ ಇತ್ತೀಚೆಗೆ ಆಯ್ಕೆಯಾಗಿದ್ದರು. ಅವರಿಗೆ ಬಹುಕಾಲದಿಂದ ಪರಿಚಿತರಿದ್ದ ವಕೀಲ ಮನೀಶ್ ಶರ್ಮಾ, ಯಾದವ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.