ನವದೆಹಲಿ (ಪಿಟಿಐ): ಸಮಾಜ ವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ಅವರು ಬಿಜೆಪಿಯ ಏಜೆಂಟರು ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಆರೋಪಿಸಿದರು.
ಆಜಾದ್ ಅವರು ಬಿಜೆಪಿಯ ಏಜೆಂಟ್ ಎಂದು ಕೆಲ ದಿನಗಳ ಹಿಂದೆ ಆರೋಪಿಸಿದ್ದಬಿಎಸ್ಪಿ ನಾಯಕಿ ಮಾಯಾವತಿ, ವಾರಾಣಸಿಯಿಂದ ಆಜಾದ್ ಸ್ಪರ್ಧಿಸಲಿದ್ದು,ದಲಿತ ಮತಗಳನ್ನು ವಿಭಜಿಸಲು ಬಿಜೆಪಿ ಸಂಚು ಹೂಡಿದೆ ಎಂದಿದ್ದರು.
ಜೈಪುರದಲ್ಲಿ ಮಾತನಾಡಿದ ಆಜಾದ್, ತಾವು ವಾರಾಣಸಿಯಿಂದ ಸ್ಪರ್ಧಿಸುತ್ತಿಲ್ಲ ಎಂದರು. ‘ನನ್ನ ಉಮೇದು ವಾರಿಕೆಯಿಂದ ಮೋದಿ ಅವರ ಬಲ ವೃದ್ಧಿಸುವಂತಿದ್ದರೆ, ನಾನು ಸ್ಪರ್ಧೆ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
‘ದಲಿತರ ಮೇಲೆ ದೌರ್ಜನ್ಯ ಎಸಗಿದ ಅಧಿಕಾರಿಗಳಿಗೆ ಅಖಿಲೇಶ್ ಅವರು ಬಡ್ತಿ ನೀಡಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಸಂಸತ್ತಿನಲ್ಲಿ ಮುಲಾಯಂ ಹೇಳುತ್ತಾರೆ. ಇವರಿಬ್ಬರೂ ಬಿಜೆಪಿಯ ಏಜೆಂಟರು’ ಎಂದು ಆಜಾದ್ ಆರೋಪಿಸಿದ್ದಾರೆ.
‘ಅವರನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಏಜೆಂಟ್ ಎಂದು ಕರೆದರು. ಹೌದು, ನಾನು ಬಿ.ಆರ್. ಅಂಬೇಡ್ಕರ್ ಅವರ ಏಜೆಂಟ್. ನಿಮಗೆ (ಅಖಿಲೇಶ್)ಮತ ಹಾಕಿ ಅಧಿಕಾರ ಕೊಡಿಸುವ ನಮಗೆ, ಅಧಿಕಾರದಿಂದ ಕೆಳಗಿಳಿಸಲೂ ಬರುತ್ತದೆ ಎಂಬುದನ್ನು ತೋರಿಸುತ್ತೇವೆ’ ಎಂದರು.