ತ್ರಿವಳಿ ತಲಾಖ್ ಮಸೂದೆಯನ್ನು ಪುನಃ ಮಂಡನೆ ಮಾಡುವ ಕುರಿತು ಪ್ರತಿಕ್ರಿಯಿಸಿರುವ ರವಿಶಂಕರ್ ಪ್ರಸಾದ್, ‘ತ್ರಿವಳಿ ತಲಾಖ್ ವಿಷಯ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿದೆ. ಖಂಡಿತ ಮಸೂದೆ ಮಂಡನೆ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ. ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರಲಿಲ್ಲ. 16ನೇ ಲೋಕಸಭೆ ವಿಸರ್ಜನೆಯಾದ ಕಾರಣ, ಈಗ ಮಸೂದೆ ಸಹ ರದ್ದಾಗಿದೆ. ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆ ಅಲ್ಲಿ ಅಂಗೀಕಾರವಾಗದೆ ಇದ್ದರೂ, ಲೋಕಸಭೆ ವಿಸರ್ಜನೆ ಆದಾಗ ರದ್ದಾಗುವುದಿಲ್ಲ. ಆದರೆ ಲೋಕಸಭೆಯಲ್ಲಿ ಮಂಡನೆಯಾದ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗದೆ ಇದ್ದರೆ, ಲೋಕಸಭೆ ವಿಸರ್ಜನೆ ಆದಾಗ ರದ್ದಾಗುತ್ತದೆ.