ನವದೆಹಲಿ: ಪಶ್ಚಿಮಬಂಗಾಳದ ಭಾಟಪಾರದಲ್ಲಿ ನಡೆದ ಗುಂಪು ಘರ್ಷಣೆ, ಪೊಲೀಸರು ಗುಂಡು ಹಾರಿಸಿದ ಪ್ರಕರಣ ಕುರಿತು ವರದಿ ಸಲ್ಲಿಸಲುಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೂವರು ಸದಸ್ಯರ ನಿಯೋಗವನ್ನು ರಚಿಸಿದ್ದಾರೆ.
ಸಂಸದರಾದ ಎಸ್.ಎಸ್.ಅಹ್ಲುವಾಲಿಯಾ, ಸತ್ಪಾಲ್ ಸಿಂಗ್ ಮತ್ತು ಬಿ.ಡಿ.ರಾಮ್ ಅವರನ್ನು ಒಳಗೊಂಡ ನಿಯೋಗ ಸ್ಥಳಕ್ಕೆ ಭೇಟಿ ನೀಡಲಿದ್ದು, ಘಟನೆ ಕುರಿತು ಅಧ್ಯಕ್ಷರಿಗೆ ವರದಿ ಸಲ್ಲಿಸಲಿದೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.
ಅಹ್ಲುವಾಲಿಯಾ ಪಶ್ಚಿಮ ಬಂಗಾಳದಿಂದಲೇ ಸಂಸತ್ತಿಗೆ ಆಯ್ಕೆಯಾಗಿದ್ದರೆ, ಸತ್ಪಾಲ್ ಸಿಂಗ್ ಮತ್ತು ಬಿ.ಡಿ.ರಾಮ್ ಅವರು ಮಾಜಿ ಪೊಲೀಸ್ ಅಧಿಕಾರಿಗಳಾಗಿದ್ದು ಕ್ರಮವಾಗಿ ಉತ್ತರ ಪ್ರದೇಶ, ಜಾರ್ಖಂಡ್ನಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ಭಾಟಪಾರದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಇಬ್ಬರು ಸತ್ತು, 11 ಜನ ಗಾಯಗೊಂಡಿದ್ದರು. ತನಿಖೆ ನಡೆದಿದೆ. ಗುಂಪು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದರು. ಪೊಲೀಸರು ಹಾರಿಸಿದ ಗುಂಡಿನಿಂದಲೇ ಸಾವು ಸಂಭವಿಸಿದೆ ಎಂದು ಬಿಜೆಪಿ ಆರೋಪಿಸಿತ್ತು.
ನಾರ್ಥ್ 24 ಪರಗಣ ಜಿಲ್ಲೆಯ ಭಾಟಪಾರದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಎಂದು ಹೇಳಲಾದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಗೆ ಉಭಯ ಪಕ್ಷಗಳು ಪರಸ್ಪರ ವಿರುದ್ಧ ಆರೋಪ ಮಾಡಿದ್ದವು.