ನವದೆಹಲಿ: 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ಬಳಿಕ ಇದೇ ಮೊದಲ ಬಾರಿ ಮೂರು ರಾಜ್ಯಗಳ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಬಿಜೆಪಿ ಮುಖಂಡರು ರಾಜಕೀಯ ಪರಿಸ್ಥಿತಿಯ ಬಗ್ಗೆ ಗುರುವಾರ ಚರ್ಚೆ ನಡೆಸಿದ್ದಾರೆ.
2019ರ ಲೋಕಸಭಾ ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲು ಮುಂದಿನ ವರ್ಷ ಜನವರಿ 11–12ರಂದು ದೆಹಲಿಯಲ್ಲಿ ರಾಷ್ಟ್ರೀಯ ಸಮಿತಿಯ ಸಭೆ ನಡೆಸಲು ನಿರ್ಧರಿಸಲಾಗಿದೆ.
ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗದಂತೆ ನೋಡಿಕೊಳ್ಳುವುದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ವಿವಿಧ ಸಮುದಾಯಗಳನ್ನು ಆಕರ್ಷಿಸಲು ದೇಶದ ಉದ್ದಗಲಕ್ಕೂ ಹಲವು ಸಮಾವೇಶಗಳನ್ನು ನಡೆಸಲು ಯೋಜಿಸಲಾಗಿದೆ.
29 ರಾಜ್ಯಗಳ ಪದಾಧಿಕಾರಿಗಳು ಸಭೆಯಲ್ಲಿ ಇದ್ದರು.ಮೂರು ರಾಜ್ಯಗಳ ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ಚರ್ಚೆ ಮಾಡಲು ಈ ಸಭೆ ನಡೆಸಿಲ್ಲ. ಇದು ಮೊದಲೇ ನಿರ್ಧರಿತವಾಗಿದ್ದ ಸಭೆ ಎಂದು ಬಿಜೆಪಿ ಹೇಳಿದೆ.
ಆದರೆ, ಪಕ್ಷದ ಸಾಂಪ್ರದಾಯಿಕ ನೆಲೆ ಎಂದೇ ಪರಿಗಣಿಸಲಾಗುವ ಮಧ್ಯಪ್ರದೇಶ ಮತ್ತು ಛತ್ತೀಸಗಡದ ಸೋಲಿನ ಬಗ್ಗೆಸಭೆಯಲ್ಲಿ ಬಿರುಸಿನ ಚರ್ಚೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಸಾಲು ಸಾಲು ಕಾರ್ಯಕ್ರಮ
l ಏಳು ಮೋರ್ಚಾಗಳಿಂದ ರಾಷ್ಟ್ರೀಯ ಸಮಾವೇಶ
l ಹಿಂದುಳಿದವರು, ದಲಿತರು, ಬುಡಕಟ್ಟು ಮತ್ತು ಮಹಿಳಾ ಮತದಾರರ ಆಕರ್ಷಿಸಲು ಕ್ರಮ
l ಒಬಿಸಿ ಮೋರ್ಚಾದ ರಾಷ್ಟ್ರೀಯ ಸಮಾವೇಶ ಪಟ್ನಾದಲ್ಲಿ ನಡೆಸಲು ನಿರ್ಧಾರ
l ಉತ್ತರ ಪ್ರದೇಶದಲ್ಲಿ ನಡೆಯುವ ರೈತ ಸಮಾವೇಶದಲ್ಲಿ ಮೋದಿ ಭಾಷಣ
l ಅಮಿತ್ ಶಾ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತ ಘಟಕದ ಸಮಾವೇಶ