ನವದೆಹಲಿ: ಲೋಕಸಭಾ ಚುನಾವಣೆಯ ಥೀಮ್ ಹಾಗೂ ಘೋಷವಾಕ್ಯವನ್ನು ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು ಭಾನುವಾರ ಬಿಡುಗಡೆ ಮಾಡಿದ್ದಾರೆ.
‘ಒಗ್ಗೂಡಿಸುವ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಮೋದಿ ಹಾಗೂ ಸದಾ ಗೊಂದಲ ಸ್ಥಿತಿಯ ಕಲಬೆರಕೆ ಪ್ರತಿಪಕ್ಷಗಳ ನಡುವೆ ಆಯ್ಕೆ ಮತದಾರರದ್ದು’ ಎಂದು ಜೇಟ್ಲಿ ಹೇಳಿದ್ದಾರೆ.
ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದಜೇಟ್ಲಿ, ‘ಒಬ್ಬ ನಾಯಕನ ನೇತೃತ್ವದ ಸರ್ಕಾರ ಬೇಕೇ ಅಥವಾ 40 ಮಂದಿ ನಾಯಕರಿರುವ ತಂಡ ಬೇಕೇ’ ಎಂದು ಪ್ರಶ್ನಿಸಿದರು.
‘ಮತ್ತೊಮ್ಮೆ ಮೋದಿ ಸರ್ಕಾರ’ (ಫಿರ್ ಏಕ್ ಬಾರ್ ಮೋದಿ ಸರ್ಕಾರ್)ಚುನಾವಣಾ ಘೋಷವಾಕ್ಯವು ಮೋದಿ ಸರ್ಕಾರದ ಐದು ವರ್ಷಗಳ ಸಾಧನೆ, ಪ್ರಮಾಣಿಕತೆ ಹಾಗೂ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೋದಿ ಸಾಮರ್ಥ್ಯದ ಮೇಲೆ ಕೇಂದ್ರೀಕೃತವಾಗಿದೆ.
ಚುನಾವಣಾ ಪ್ರಚಾರ ಸಾಮಗ್ರಿ, ವಿಡಿಯೊಗಳನ್ನು ಬಿಡುಗಡೆ ಮಾಡಲಾಯಿತು.
ಯೋಗಿ ವಿರುದ್ಧ ದೂರು ನವದೆಹಲಿ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿಯ ಇತರರ ವಿರುದ್ಧ ಕ್ರಮ ತೆಗೆದುಕೊಳ್ಳವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ವಯನಾಡ್ನಲ್ಲಿ ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಸಿದ ಬಳಿಕ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ನೀಡಿದ ಪ್ರತಿಕ್ರಿಯೆಗಳನ್ನು ಖಂಡಿಸಿಮುಸ್ಲಿಂ ಲೀಗ್ ಮುಖಂಡರು ದೂರು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಆದಿತ್ಯನಾಥ್ ಅವರು ಟ್ವೀಟ್ ಒಂದರಲ್ಲಿ, ‘ಮುಸ್ಲಿಂ ಲೀಗ್ ವೈರಸ್ ಇದ್ದಂತೆ. ಕಾಂಗ್ರೆಸ್ ಪಕ್ಷ ಈ ವೈರಸ್ಗೆ ತುತ್ತಾಗಿದೆ. ಒಂದು ವೇಳೆ ಅವರು ಚುನಾವಣೆಯಲ್ಲಿ ಗೆದ್ದರೆ ಏನಾದೀತು? ವೈರಸ್ ಇಡೀ ದೇಶವನ್ನು ವ್ಯಾಪಿಸುತ್ತದೆ’ ಎಂದಿದ್ದರು.
ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಿಜೆಪಿಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ಬಿಜೆಪಿ ಬೆಂಬಲಿಗ ಶಿಫಾಲಿ ವೈದ್ಯ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.