ಲಖನೌ: ಭಾರತೀಯ ಜನತಾ ಪಕ್ಷ (ಬಿಜೆಪಿ) ಸಮಾಜವನ್ನು ಇಬ್ಭಾಗ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಬಹರಾಯಿಚ್ ಕ್ಷೇತ್ರದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಪಕ್ಷದ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಬಹಳ ದಿನಗಳಿಂದ ಪಕ್ಷದ ನಾಯಕತ್ವವನ್ನು ಟೀಕಿಸುತ್ತ ಬಂದಿದ್ದ ಫುಲೆ, ಹಿಂದುತ್ವದ ಉದ್ದೇಶವನ್ನಿಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸ ಬಿಜೆಪಿಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
‘ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ಅವಧಿ ಮುಗಿಯುವವರೆಗೆ ಸಂಸದೆಯಾಗಿ ಮುಂದುವರಿಯುತ್ತೇನೆ.ದಲಿತರ ಪ್ರಗತಿಗಾಗಿ ಡಿಸೆಂಬರ್ 23 ರಿಂದ ಚಳವಳಿ ಆರಂಭಿಸುತ್ತೇನೆ. ದೇಶಕ್ಕೆ ಸಂವಿಧಾನ ಬೇಕೆ ಹೊರತು ಮಂದಿರ ಬೇಕಾಗಿಲ್ಲ’ ಎಂದು ಅವರು ಹೇಳಿದ್ದಾರೆ.
ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ದಲಿತರಿಗೆ ತಾರತಮ್ಯ ಮಾಡುತ್ತಿವೆ ಎಂದು ಸಾವಿತ್ರಿಬಾಯಿ ಫುಲೆ ಆರೋಪಿಸಿದ್ದಾರೆ.