ನವದೆಹಲಿ: ‘ದೇಶ ಸದೃಢ ಸರ್ಕಾರವನ್ನು ಬಯಸುತ್ತಿದೆ. ಅಸಹಾಯಕ ಸರ್ಕಾರವನ್ನಲ್ಲ. ಜನರು ಬಿಜೆಪಿಗೆ ಮತ ನೀಡಬೇಕು‘ ಎಂದು ಪಂಡಿತ್ ಜಸ್ರಾಜ್, ವಿವೇಕ್ ಒಬೆರಾಯ್ ಮತ್ತು ರೀತಾ ಗಂಗೂಲಿ ಸೇರಿದಂತೆ 900ಕ್ಕೂ ಹೆಚ್ಚು ಕಲಾವಿದರು ಬುಧವಾರ ಹೇಳಿಕೆಯ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.
ಯಾವುದೇ ಒತ್ತಡ ಮತ್ತು ಪೂರ್ವಗ್ರಹಕ್ಕೆ ಒಳಗಾಗದೆ ಬಿಜೆಪಿಗೆ ಮತ ಹಾಕುವಂತೆ ಕೋರಿದ್ದಾರೆ.
ಭಯೋತ್ಪಾದನೆಯಂತಹ ಸವಾಲುಗಳನ್ನು ಎದುರಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಅಗತ್ಯವಿದೆ. ಈಗಿನ ಸರ್ಕಾರ ಮುಂದುವರಿಯಬೇಕೆಂಬುದು ನಮ್ಮ ಆಶಯ ಎಂದೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿಪರ ಸರ್ಕಾರವನ್ನು ಕಳೆದ ಐದು ವರ್ಷಗಳಲ್ಲಿ ಭಾರತ ದೇಶ ಕಂಡಿದೆ’ ಎಂದು ಶಂಕರ ಮಹಾದೇವನ್, ತ್ರಿಲೋಕಿ ನಾಥ್ ಮಿಶ್ರಾ, ಅನುರಾಧಾ ಪೌಡವಾಲ, ಹನ್ಸ್ರಾಜ್ ಹನ್ಸ್ ಮೊದಲಾದವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಗೆ ಮತ ನೀಡಬಾರದು ಎಂದು ಅಮೋಲ್ ಪಾಲೇಕರ್, ನಾಸಿರುದ್ದೀನ್ ಶಾ, ಗಿರೀಶ ಕಾರ್ನಾಡ ಸೇರಿದಂತೆ 600ಕ್ಕೂ ಹೆಚ್ಚು ರಂಗಕರ್ಮಿಗಳು ಕಳೆದ ವಾರ ಜಂಟಿ ಹೇಳಿಕೆಯಲ್ಲಿ ಜನರಿಗೆ ಮನವಿ ಮಾಡಿದ್ದರು.