ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರದಲ್ಲಿ ತನ್ನ ಹಾಗೂ ಸಂಬಂಧಿಕರ ಮನೆ ಬೆಂಕಿಗಾಹುತಿಯಾಗಿದೆ ಎಂದು ಬಿಜೆಪಿಯ ಮುಸ್ಲಿಂ ನಾಯಕ ಅಖ್ತರ್ ರಾಜಾ ಹೇಳಿದ್ದಾರೆ.
ಬಿಜೆಪಿಯಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ ಅಖ್ತರ್ ರಾಜಾ. ಫೆಬ್ರುವರಿ 25ರಂದು ನಡೆದ ಗಲಭೆಯಲ್ಲಿ ಭಗೀರಥ್ ವಿಹಾರದಲ್ಲಿರುವ ತನ್ನ ಮನೆಗೆದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ರಾಜಾ ಹೇಳಿದ್ದಾರೆ.
ದುಷ್ಕರ್ಮಿಗಳ ಗುಂಪು ಧಾರ್ಮಿಕ ಘೋಷಣೆಗಳನ್ನು ಕೂಗಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಆ ಪ್ರದೇಶದಲ್ಲಿ ಮುಸ್ಲಿಮರ 19 ಮನೆಗಳಿದ್ದವು. ಅದರಲ್ಲಿ ಒಂದು ನಮ್ಮನೆ ಮತ್ತು ಮೂರು ಮನೆ ನಮ್ಮ ಸಂಬಂಧಿಕರದ್ದು. ಎಲ್ಲ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.ಗಲಭೆ ಮಾಡಿದವರೆಲ್ಲರೂ ಹೊರಗಿನವರಾಗಿದ್ದಾರೆ. ಮನೆ ಹೊತ್ತಿ ಉರಿಯುತ್ತಿದ್ದಾಗ ಅಲ್ಲಿಂದ ನಾನು ಮತ್ತು ನನ್ನ ಕುಟುಂಬದ 12 ಸದಸ್ಯರು ಹೊರಗೆ ಓಡಿದೆವು. ಆಗ ಜನರಗುಂಪೊಂದು ನಮ್ಮ ಮೇಲೆ ಕಲ್ಲು ತೂರಾಟ ಮಾಡಿದೆ.
ನಾನು ಪೊಲೀಸರ ಸಹಾಯ ಕೇಳಿದಾಗ ಸಿಬ್ಬಂದಿ ಕೊರತೆ ಇದೆ ಎಂಬ ಉತ್ತರ ಅಲ್ಲಿಂದ ಬಂತು. ಪಕ್ಷದವರಿಂದ ಯಾವುದೇ ಫೋನ್ ಕರೆಯಾಗಲೀ,ಪರಿಹಾರವಾಗಲೀ ನನಗೆ ಸಿಗಲಿಲ್ಲ. ಆದರೆ ನನಗೆ ನ್ಯಾಯ ಕೊಡಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ ಎಂದಿದ್ದಾರೆ ಅಖ್ತರ್ ರಾಜಾ.