ನವಲಗುಂದ: ‘ಕರ್ನಾಟಕದ ಯಾವ ಮೂಲೆಗೆ ಹೋದರೂ ಕುಮಾರಣ್ಣ ಎನ್ನುತ್ತಾರೆ. ಅದೇರೀತಿ ಕ್ಷೇತ್ರದ ಯಾವ ಗ್ರಾಮಕ್ಕೆ ಹೋದರೂ ಕೋನರಡ್ಡಿ ಎನ್ನುತ್ತಾರೆ. ಕುಮಾರಣ್ಣ ಈ ರಾಜ್ಯದ ಮುಖ್ಯಮಂತ್ರಿ ಆಗುವುದು ಎಷ್ಟು ಸತ್ಯವೋ ಕೋನರಡ್ಡಿ ಮತ್ತೊಮ್ಮೆ ನವಲಗುಂದ ಕ್ಷೇತ್ರದ ಶಾಸಕರಾಗಿ, ಸಚಿವರಾಗುವುದೂ ಅಷ್ಟೇ ಸತ್ಯ’ ಎಂದು ಜೆ.ಡಿ.ಎಸ್ ಪಕ್ಷದ ವಕ್ತಾರ ಟಿ.ಎ.ಶರವಣ ಬಣ್ಣಿಸಿದರು.
ಶಾಸಕರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜೆ.ಡಿ.ಎಸ್.ಪಕ್ಷಕ್ಕೆ ಸೇರ್ಪಡೆಗೊಂಡ ಆರ್ಯವೈಶ್ಯ ಸಮಾಜದ ಪ್ರಮುಖರ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶರವಣ, ‘ಆರ್ಯವೈಶ್ಯ ಸಮಾಜದ ಬಂಧುಗಳು ಸೇರಿದಂತೆ ಎಲ್ಲ ಸಮಾಜದ ಜನರು ಕೋನರಡ್ಡಿ ಅವರನ್ನು ಬೆಂಬಲಿಸಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಕೋರಿದರು.
ಈ ಸಂದರ್ಭದಲ್ಲಿ ವಕೀಲ ಶ್ಯಾಮಸುಂದರ ಡಂಬಳ, ಮುರಳಿ ಹೆಬಸೂರ, ಗಿರೀಶ ರಟ್ಟಿಹಳ್ಳಿ, ಡಿ.ಎಲ್. ಬೆಟದೂರ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರಿದರು.
ನಂತರ ಶ್ಯಾಮಸುಂದರ ಡಂಬಳ ಅವರನ್ನು ನವಲಗುಂದ ತಾಲ್ಲೂಕು ಜೆಡಿಎಸ್ ವಕೀಲರ ಘಟಕದ ಅಧ್ಯಕ್ಷರನ್ನಾಗಿ ಹಾಗೂ ತಾಲ್ಲೂಕಿನ ಬಲ್ಲರವಾಡ ಗ್ರಾಮದ ಬಸವರಾಜ ಹಿರೆಣ್ಣವರ ಜೆಡಿಎಸ್ ಪಕ್ಷದ ತಾಲ್ಲೂಕು ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೀರಣ್ಣ ನೀರಲಗಿ ಆದ್ಯಕ್ಷತೆ ವಹಿಸಿದ್ದರು.
ರಾಜ್ಯ ಜೆಡಿಎಸ್ ವಿಕಲಚೇತನ ಘಟಕದ ಅಧ್ಯಕ್ಷ ದೇವೇಂದ್ರ ಉಪಸ್ಥಿತರಿದ್ದರು.