ಚಂಡೀಗಡ: ಸೇನಾ ತುಕಡಿಗಳಲ್ಲಿನ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿದ್ದ ಬಿಎಸ್ಎಫ್ ಮಾಜಿ ಯೋಧರೊಬ್ಬರ ಮಗ ಸಾವಿಗೀಡಾಗಿದ್ದಾರೆ.
ಬಿಎಸ್ಎಫ್ ಕಾನ್ಸ್ಟೆಬಲ್ ತೇಜ್ಬಹದ್ದೂರ್ ಅವರನ್ನು ಈ ಕಾರಣಕ್ಕಾಗಿ ಅಮಾನತು ಮಾಡಲಾಗಿತ್ತು. ಈಗ, ಅವರ ಮಗ ರೋಹಿತ್ ಯಾದವ್ (20) ಅವರು ಮನೆಯಲ್ಲಿಯೇ ಸಾವಿಗೀಡಾಗಿದ್ದು, ದೇಹದ ಮೇಲೆ ಗುಂಡೇಟಿನ ಗುರುತುಗಳಿವೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು 2017ರಲ್ಲಿ ತೇಜ್ಬಹದ್ದೂರ್ ಹೇಳಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಪ್ರಕರಣದ ನಂತರ ಅವರನ್ನು ಅಮಾನತುಗೊಳಿಸಲಾಗಿತ್ತು.
ತೇಜ್ಬಹದ್ದೂರ್ ಕುಂಭಮೇಳಕ್ಕೆ ತೆರಳಿದ್ದರು. ರೋಹಿತ್ ಅವರ ತಾಯಿಯೂ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
‘ನಾವು ನೋಡಿದಾಗ ರೋಹಿತ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರ ಕೈಯಲ್ಲಿ, ತಂದೆ ಪರವಾನಗಿ ಹೊಂದಿದ್ದ ಪಿಸ್ತೂ ಲ್ ಇತ್ತು’ ಎಂದು ಅವರು ಹೇಳಿದ್ದಾರೆ.