ಉಜಿರೆ:‘ಎತ್ತಿನಹೊಳೆ ಯೋಜನೆಯನ್ನು ತಡೆಯುವ ಬಗ್ಗೆ ನಾನು ಎಂದೂ ಹೇಳಿಕೆ ನೀಡಿಲ್ಲ. ಆ ಯೋಜನೆಯಲ್ಲಿ ಅನ್ಯಾಯ, ಅಕ್ರಮವಾಗಿದ್ದರೆ ಅದನ್ನು ತಡೆಗಟ್ಟುತ್ತೇನೆ’ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಧರ್ಮಸ್ಥಳದಲ್ಲಿ ಮಂಗಳವಾರ ದೇವರ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಕರಾವಳಿ ಜಿಲ್ಲೆಯ ಯುವಜನ ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ರಚನಾತ್ಮಕ ಕೆಲಸಗಳಲ್ಲಿ ತೊಡಗಬೇಕು. ಸಮಾಜಬಾಹಿರ ಕೃತ್ಯಗಳಲ್ಲಿ ಭಾಗವಹಿಸಬಾರದು’ ಎಂದು ಕಿವಿಮಾತು ಹೇಳಿದರು.
ಶೃಂಗೇರಿ: ಪೂಜೆ, ಚಂಡಿಕಾಯಾಗ
ಕುಮಾರಸ್ವಾಮಿ ಅವರು ಮಂಗಳವಾರ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಅನಿತಾ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಪತ್ನಿ ಚೆನ್ನಮ್ಮ, ಪುತ್ರಿ ಅನಸೂಯಾ, ಪುತ್ರ, ಶಾಸಕ ಎಚ್.ಡಿ. ರೇವಣ್ಣ ಅವರು ಇದ್ದರು.
ದೇಗುಲದ ಆವರಣದಲ್ಲಿನ ಚಂದ್ರಶೇಖರ ಭಾರತೀ ಸ್ವಾಮೀಜಿ ಸಭಾ ಭವನದಲ್ಲಿ ಕುಟುಂಬದವರೊಡಗೂಡಿ ಚಂಡಿಕಾಯಾಗ, ಪೂರ್ಣಾಹುತಿ ಕೈಂಕರ್ಯ ನೆರವೇರಿಸಿದರು. ನಂತರ, ನರಸಿಂಹ ವನಕ್ಕೆ ತೆರಳಿ ಭಾರತೀ ತೀರ್ಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಅಲ್ಲಿಂದ ಕಾಳಿಕಾಂಬ ದೇವಸ್ಥಾನಕ್ಕೆ ತೆರಳಿ ನಮಿಸಿದರು. ತೋರಣ ಗಣಪತಿ ದೇಗುಲದಲ್ಲಿ ಈಡುಗಾಯಿ ಸೇವೆ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.